ಸೂರಿಕುಮೇರು ಗ್ಯಾಸ್ ಟ್ಯಾಂಕರ್ ಪಲ್ಟಿ ಕಾರ್ಯಾಚರಣೆ ವೇಳೆ ಬಳಕೆಯಾದ ನೀರೆಷ್ಟು ಗೊತ್ತೆ
ಬಂಟ್ವಾಳ: ತಾಲೂಕಿನ ಕಲ್ಲಡ್ಕ ಸಮೀಪದ ಸೂರಿಕುಮೇರು ತಿರುವಿನಲ್ಲಿ ಸೋಮವಾರ ರಾತ್ರಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯನ್ನು ಹತೋಟಿಗೆ ತರಲು ಅಗ್ನಿ ಶಾಮಕ ದಳದ ಸಿಬ್ಬಂದಿ ಎಡೆಬಿಡದೆ 9 ಗಂಟೆಗಳ ಕಾರ್ಯಾಚರಣೆ ನಡೆಸಿದರು. ಮಂಗಳೂರು ಅಗ್ನಿ ಶಾಮಕ ದಳದ ಮುಖ್ಯಸ್ಥ ಶಶಿಧರ್, ಜಿಲ್ಲಾ ಅಗ್ನಿ ಶಾಮಕ ದಳದ ಮುಖ್ಯಸ್ಥ ಬಿ.ಶೇಕರ್, ಪ್ರದೇಶಿಕ ಅಗ್ನಿ ಶಾಮಕ ದಳದ ಅಧಿಕಾರಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ 40 ಮಂದಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಒಟ್ಟು ಬಂಟ್ವಾಳ, ಪುತ್ತೂರು, ಮಂಗಳೂರು ಸೇರಿದಂತೆ 9 ಅಗ್ನಿ ಶಾಮಕ ದಳದ ವಾಹನಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. 16,000 ಲೀಟರ್ ನೀರಿನ ಸಾಮರ್ಥ್ಯದ 2 ವಾಹನ, 9 ಸಾವಿರ ಲೀಟರ್ ನೀರಿನ ಸಾಮರ್ಥ್ಯದ 2 ವಾಹನ ಹಾಗೂ 4,500 ಲೀಟರ್ ನೀರಿನ ಸಾಮರ್ಥ್ಯದ 4 ವಾಹನಗಳು ಸುಮಾರು ಹತ್ತಕ್ಕೂ ಹೆಚ್ಚು ಬಾರಿ ನೀರನ್ನು ತುಂಬಿಸಿಕೊಂಡು ಬಂದು ಟ್ಯಾಂಕರ್ ಸುತ್ತ ಸಿಂಪಡಿಸಿ ಅನಾಹುತ ಸಂಭವಿಸದಂತೆ ಮುಂಜಾಗೃತೆ ವಹಿಸುವ ಕಾರ್ಯಾಚರಣೆ ನಡೆಸಲಾಯಿತು. ಎಚ್ಪಿಸಿಎಲ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿ ಅನಿಲವನ್ನು ಬದಲಿ ಟ್ಯಾಂಕರ್ಗೆ ತುಂಬಿಸುವ ಮೂಲಕ ಮಂಗಳವಾರ ಬೆಳಗ್ಗೆ 8:30ರ ವೇಳೆಗೆ ಅನಿಲ ಸೋರಿಕೆಯನ್ನು ಹತೋಟಿಗೆ ತಂದರು. ತದ ನಂತರವೇ ಪರಿಸರವಾಸಿಗಳು ನಿಟ್ಟುಸಿರು ಬಿಟ್ಟರು. ನಂತರ ಟ್ಯಾಂಕರನ್ನು ಸ್ಥಳದಿಂದ ತೆರವುಗೊಳಿಸಲಾಗಿದ್ದು ಪರಿಸ್ಥಿತಿ ಯಥಾಸ್ಥಿತಿಗೆ ಮರಳಿದೆ