ಆಸ್ಪತ್ರೆ ಕಟ್ಟಡದಿಂದ ಜಿಗಿದು ಬಾಣಂತಿ ಮೃತ್ಯು
ಕಾಸರಗೋಡು, ಎ.25: ಆಸ್ಪತ್ರೆ ಕಟ್ಟಡದ 5ನೆ ಮಹಡಿಯಿಂದ ಜಿಗಿದು ಬಾಣಂತಿ ಮೃತಪಟ್ಟ ಘಟನೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಬಾಣಂತಿಯನ್ನು ಹೊಸದುರ್ಗ ಅಲಾಮಿ ಪಳ್ಳಿಯ ರಾಮದಾಸ್ ಎಂಬವರ ಪತ್ನಿ ಸಿಮಿ (31) ಎಂದು ಗುರುತಿಸಲಾಗಿದೆ.
ಸಿಮಿಯವರನ್ನು ಹೆರಿಗೆಗಾಗಿ ಎ.20ರಂದು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ರಕ್ತಸ್ರಾವ ಉಂಟಾದುದರಿಂದ ಮರುದಿನ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯ ಬಳಿಕ ಸಿಮಿ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ತಿಳಿದುಬಂದಿದೆ. ಈ ನಡುವೆ ಇಂದು ಬೆಳಗ್ಗೆ ಆಸ್ಪತ್ರೆಯ 5ನೆ ಮಹಡಿಯಿಂದ ಹಾರಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಿಮಿಗೆ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಾನಸಿಕ ಖಿನ್ನತೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.