ಬಾರ್‌ನಿಂದ 11 ಲಕ್ಷ ರೂ. ಕಳ್ಳತನ

Update: 2016-04-26 18:29 GMT

 ಬೆಳ್ತಂಗಡಿ, ಎ.26: ಬೆಳ್ತಂಗಡಿ ನಗರದ ಸಂತೆಕಟ್ಟೆ ಬಳಿ ಇರುವ ಡಿ.ಕೆ.ಲಾಡ್ಜ್ ಆ್ಯಂಡ್ ಬಾರ್‌ನಿಂದ ಸುಮಾರು 11 ಲಕ್ಷ ರೂ. ಕಳವುಗೈದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯವನ್ನು ಇಲ್ಲಿನ ಕೆಲಸದಾಳು ನೇಪಾಳ ಮೂಲದ ಅರ್ಜುನ್ ಎಂಬಾತ ಎಸಗಿರಬೇಕೆಂದು ಶಂಕಿಸಲಾಗಿದೆ.

ಎ.25ರಂದು ಡಿ.ಕೆ.ಲಾಡ್ಜ್ ಆ್ಯಂಡ್ ಬಾರ್‌ನ ಮೆನೇಜರ್ ಸಂತೋಷ್ ಪಿ.ಸಿ. ಬಾರ್‌ನ ವ್ಯಾಪಾರದ ಹಾಗೂ ಬಾರ್ ಮಾಲಕರ ಡಾಮಾರು ವ್ಯವಹಾರದ 11 ಲಕ್ಷ ರೂ.ವನ್ನು ವಿಶ್ರಾಂತಿ ಕೊಠಡಿಯಲ್ಲಿರಿಸಿದ್ದು, ಹಣವಿದ್ದ ಬ್ಯಾಗನ್ನು ಎಗರಿಸಲಾಗಿತ್ತು. ಇಲ್ಲಿ ಕೆಲಸ ಮಾಡುತ್ತಿದ್ದ ಅರ್ಜುನ್ ಎಂಬಾತ ಈ ಕೃತ್ಯವನ್ನು ಎಸಗಿರಬೇಕೆಂದು ಶಂಕಿಸಲಾಗಿದೆ. ಈ ಕೃತ್ಯ ನಡೆದ ಬಳಿಕ ಅರ್ಜುನ್ ನಾಪತ್ತೆಯಾಗಿದ್ದಾನೆ.

ಅಲ್ಲದೆ, ಇದೇ ಬಾರಿನಲ್ಲಿ ಎ. 22 ರಂದು ರಾತ್ರಿ 12 ಗಂಟೆಗೆ ಮೆನೇಜರ್ ವ್ಯವಹಾರ ಮುಗಿಸಿ 45,350 ರೂ. ಹಾಗೂ ಬಾರ್‌ನ ಮಾಲಕರ ಡಾಮಾರು ವ್ಯವಹಾರದ 1,60,000 ರೂ.ನ್ನು ಕ್ಯಾಶ್ ಕೌಂಟರಿನಲ್ಲಿಟ್ಟು ಹೋಗಿದ್ದರು. ಎ.23ರಂದು ಬೆಳಗ್ಗೆ 7 ಗಂಟೆಗೆ ಬಂದಾಗ ಮುಂಭಾಗದ ಬಾಗಿಲಿನ ಮೇಲೆ ಅಳವಡಿಸಿದ್ದ ಫೈಬರ್ ನಾಮಫಲಕವನ್ನು ಕಿತ್ತು, ಒಳನುಗ್ಗಿ ಕ್ಯಾಶ್ ಕೌಂಟರಿನಲ್ಲಿದ್ದ ಹಣವನ್ನು ದೋಚಿರುವುದು ಪತ್ತೆಯಾಗಿದೆ.

ಈ ಎರಡೂ ಪ್ರಕರಣ ಬೆಳ್ತಂಗಡಿ ಠಾಣೆ ಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News