ಮಟ್ಕಾ ಅಡ್ಡೆಗೆ ದಾಳಿ: 10 ಮಂದಿಯ ಸೆರೆ
ಕಾಸರಗೋಡು, ಎ.28: ಚೆರ್ಕಳದಲ್ಲಿ ಮಟ್ಕಾ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ವಿದ್ಯಾನಗರ ಠಾಣಾ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದು, 1.04 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಮೂವರು ಪರಾರಿಯಾಗಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರಿನ ಕೆ. ಎನ್. ಉಮೇಶ್ (57) , ಹೊಸಂಗಡಿ ಬಜೆಯ ಅಬೂಬಕರ್ ಸಿದ್ದೀಕ್ (40), ಧರ್ಮತ್ತಡ್ಕದ ಅಬ್ದುಲ್ಲತೀಫ್(36), ದೇಲಂಪಾಡಿ ಪರಪ್ಪದ ಮೊಯ್ದು (39), ಕುಂಬಳೆ ಮಳಿಯ ಮುಹಮ್ಮದ್ ಬಶೀರ್ (38), ಮುಳಿಯಾರ್ ನೆಲ್ಲಿಕ್ಕಾಡ್ನ ಹನೀಫ್ (31), ಪೊವ್ವಲ್ ನೆಲ್ಲಿಕಟ್ಟೆಯ ಹನೀಫ್ (31), ಧಾರವಾಡದ ಶರಬನಯ್ಯ (33), ಎಣ್ಮಕಜೆ ಕಣಿಯಡ್ಕದ ಕೆ.ಅಬ್ದುಲ್ಲ (48), ಚಿಕ್ಕಮಗಳೂರಿನ ಬಸಪ್ಪ(40) ಎಂದು ಗುರುತಿಸಲಾಗಿದೆ.
ಚೆರ್ಕಳದ ಹೊಟೇಲ್ ಕಟ್ಟಡದಲ್ಲಿ ಜೂಜಾಟ ನಡೆಯುತ್ತಿತ್ತು. ಕೊಠಡಿಯ ಬಾಗಿಲು ಹೊರಗಿನಿಂದ ಮುಚ್ಚಿದ ಸ್ಥಿತಿಯಲ್ಲಿತ್ತು. ಪೊಲೀಸರು ಬಾಗಿಲಿನ ಬೀಗ ಒಡೆದು ಪರಿಶೀಲಿಸಿದಾಗ ಜೂಜಾಟ ನಡೆಯುತ್ತಿರುವುದು ಕಂಡು ಬಂದಿದೆ. ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.