ಪ್ರತಿಯೊಬ್ಬರೂ ಸಚ್ಚಾರಿತ್ರವಂತರಾಗಿ ಬದುಕಬೇಕಾದುದು ಇಂದಿನ ಅಗತ್ಯ: ಬಾಯಾರ್ ತಂಙಳ್
ಮಂಗಳೂರು, ಎ.30: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸಚ್ಚಾರಿತ್ರ್ಯವಂತರಾಗಿ ಬದುಕಬೇಕಾದುದು ಇಂದಿನ ಅಗತ್ಯವಾಗಿದೆ ಎಂದು ಅಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯಾ ತಂಙಳ್ ಬಾಯಾರ್ ಹೇಳಿದರು.
ಇತ್ತೀಚೆಗೆ ಬೈಕಂಪಾಡಿ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ವಾರ್ಷಿಕ ಸ್ವಲಾತ್ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಮಾಜದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲದೇ, ಎಲ್ಲರೂ ಪರಸ್ಪರ ಐಕ್ಯತೆಯಿಂದ ಜೀವಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು ಇದು ಅನಿವಾರ್ಯವಾಗಿದೆ . ಕಷ್ಟದಲ್ಲಿರುವವರಿಗೆ ಯಾವುದೇ ಹಿಂಜರಿಕೆಯಿಲ್ಲದೇ, ಜಾತಿ ಮತ ಬೇಧವಿಲ್ಲದೆ ಅವರ ನೆರವಿಗೆ ಧಾವಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಬೈಕಂಪಾಡಿ ಖತೀಬ್ ಹೈದರಾಲಿ ಸಖಾಫಿ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಜಮಾ ಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಕಾರ್ಯದರ್ಶಿ ಸೈದುದ್ದೀನ್, ಉಪಾಧ್ಯಕ್ಷ ಚೈಬಾವ, ಬದ್ರಿಯಾ ಕಮಿಟಿ ಅಧ್ಯಕ್ಷ ಮುಖ್ತಾರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.