ಬೆಳ್ತಂಗಡಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಹಾಗೂ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಆರಂಭ: ಶಾಸಕ ವಸಂತ್ ಬಂಗೇರ
ಬೆಳ್ತಂಗಡಿ, ಎ.30: ಇಲ್ಲಿನ ಪ್ರಥಮ ದರ್ಜೆ ಕಾಲೇಜು ಮೇಲ್ದರ್ಜೆಗೇರಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಹಾಗೂ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಆರಂಭಿಸಲಾಗುವುದು ಎಂದು ಶಾಸಕ ವಸಂತ ಬಂಗೇರ ಹೇಳಿದ್ದಾರೆ.
ಶನಿವಾರ ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ನಡೆದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
1983ರಲ್ಲಿ 5 ಮಂದಿ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕಾಲೇಜಿನಲ್ಲಿ ಇಂದು 879 ವಿದ್ಯಾರ್ಥಿಗಳಿದು, 638 ವಿದ್ಯಾರ್ಥಿನಿಯರಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ ಪಡೆಯಲು ಈ ಕಾಲೇಜು ವರದಾನವಾಗಿದೆ. ಪ್ರಸ್ತುತ ವಾಣಿಜ್ಯ ಸ್ನಾತಕೋತ್ತರ ವಿಭಾಗ ಹಾಗು ಅರ್ಥಶಾಸ್ತ್ರ ವಿಭಾಗವನ್ನು ಹೊಂದಿದೆ. ಉಪನ್ಯಾಸಕರ ಕೊರತೆಯನ್ನು ನಿವಾರಿಸಿ ಮುಂದಿನ ದಿನಗಳಲ್ಲಿ ಇನ್ನೂ ಎರಡು ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಲಾಗುವುದು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ.ರಾಜಪ್ಪಅಧ್ಯಕ್ಷತೆ ವಹಿಸಿದ್ದರು. ಹಾಸನ ಎ.ವಿ.ಕೆ.ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸೀ.ಚ.ಯತೀಶ್ವರ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭ ಕಾಲೇಜಿನ ಉಪನ್ಯಾಸಕ ಡಾ. ಸುಕೇಶ್, ಪಪಂ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮುಗುಳಿ ನಾರಾಯಣ ರಾವ್, ಕಾಲೇಜಿನ ವಾಲಿಬಾಲ್ ಕ್ರೀಡಾಪಟು ಶೋಭಾರನ್ನು ಶಾಸಕರು ಸಮ್ಮಾನಿಸಿದರು.
ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿ ವಿನಯ ಚಂದ್ರ, ಜೊತೆ ಕಾರ್ಯದರ್ಶಿ ಆಯಿಶಾ ಕೆ., ಉಪಾಧ್ಯಕ್ಷ ಚೇತನ್ ಆರ್. ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಸಂಚಾಲಕ ಡಾ. ಸುಬ್ರಹ್ಮಣ್ಯ ಕೆ. ಸ್ವಾಗತಿಸಿದರು.
ವೇದಿಕೆಯ ಅಧ್ಯಕ್ಷೆ ಸಂಧ್ಯಾ ವಿ.ಹೆಚ್. ವಂದಿಸಿದರು. ವಿದ್ಯಾರ್ಥಿನಿಯರಾದ ಶ್ವೇತಾ ಕೆ.ಎಸ್., ಹಾಗೂ ಆಶಿಕಾ ಪರ್ಝಾನಾ ಕಾರ್ಯಕ್ರಮ ನಿರೂಪಿಸಿದರು