ರೈತರ ಸಮಸ್ಯೆಗಳತ್ತ ಸರಕಾರ ಕಣ್ಣು ತೆರೆಯಲಿ

Update: 2016-04-30 18:56 GMT

ಸಿದ್ಧಾಪುರ, ಎ.30: ವಾರಾಹಿ ಯೋಜ ನೆಯೂ ಸೇರಿದಂತೆ ಜಿಲ್ಲೆಯ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳತ್ತ ಸರಕಾರದ ಗಮನ ಸೆಳೆಯಲು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ರೈತರ ಸಂಘ ಇಂದು ಸಿದ್ದಾಪುರದ ಸತ್ಯಾಗ್ರಹ ಸರ್ಕಲ್‌ನಲ್ಲಿ ದಿನವಿಡೀ ಧರಣಿ, ಸಮಾಲೋಚನಾ ಸಭೆ ನಡೆಸಿತು.
1979-80ರಲ್ಲಿ ಪ್ರಾರಂಭಗೊಂಡ ವಾರಾಹಿ ನೀರಾವರಿ ಯೋಜನೆ ಮೂಲ ಉದ್ದೇಶವಿದ್ದುದು 9.54 ಕೋ.ರೂ. ವೆಚ್ಚದಲ್ಲಿ ಕುಂದಾಪುರ ಮತ್ತು ಉಡುಪಿ ತಾಲೂಕುಗಳ 15,702 ಹೆಕ್ಟೇರ್ ಭೂಮಿಗೆ ನೀರುಣಿಸುವುದು. ಆದರೆ ಜಿಲ್ಲೆಯ ರೈತರ ಇಚ್ಛಾಶಕ್ತಿಗೆ ಸವಾಲಿನಂತೆ ಬೆಳೆದು ನಿಂತಿರುವ ಈ ಯೋಜನೆ 600 ಕೋ. ರೂ. ನುಂಗಿದರೂ ಉದ್ದೇಶಿತ ಗುರಿಯ ಸಮೀಪಕ್ಕೂ ಬಂದಿಲ್ಲ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು.
ಉಡುಪಿ ಜಿಲ್ಲಾ ರೈತ ಸಂಘ ಹಾಗೂ ಜಿಲ್ಲೆಯ ರೈತರ ಒತ್ತಾಸೆಯ ಫಲವಾಗಿ 35 ವರ್ಷಗಳ ಬಳಿಕ ಕಳೆದ ವರ್ಷ 2015ರ ಮೇ 4ರಂದು ಯೋಜನೆ ಉದ್ಘಾಟನೆಗೊಂಡಿತು. ಆದರೆ ಅದಾಗಿ ಒಂದು ವರ್ಷ ಕಳೆಯುತ್ತಾ ಬಂದರೂ ಅಂದು ಸುಮಾರು 48 ಕಿ.ಮೀ. ತನಕ ನೀರು ಹರಿದ ಬಳಿಕ ಇಂದಿನವರೆಗೂ ಯೋಜನೆ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಬದಲಾಗಿ ನೀರು ರೈತರಿಗೆ ತುರ್ತಾಗಿ ಅಗತ್ಯ ಇರುವ ಎಪ್ರಿಲ್‌ನ ಬೇಸಿಗೆಯಲ್ಲಿ ಶಿಖರದಲ್ಲೇ ಕಾಲುವೆಯಲ್ಲಿ ನೀರು ಹಾಯಿಸುವುದನ್ನು ನಿಲ್ಲಿಸಲಾಗಿದೆ. ಇದು ರೈತರಿಗೆ ಆತಂಕ ತಂದಿದೆ ಎಂದರು.
ಗುತ್ತಿಗೆದಾರರಿಗೆ ಅನುಕೂಲ: ಈ ಯೋಜನಾ ಪ್ರದೇಶದಲ್ಲಿ ಹಿತಾಸಕ್ತಿ ಯನ್ನು ಹೊಂದಿರುವ ವಿದ್ಯುತ್ ಉತ್ಪಾದನಾ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಮೂಲ ಯೋಜನೆಯನ್ನೇ ನನೆಗುದಿಗೆ ಹಾಕುವ ಮೂಲಕ ಕ್ರಮೇಣ ಯೋಜನೆಯನ್ನೇ ನಿಷ್ಪ್ರಯೋಜಕ ಎಂದು ಸ್ಥಗಿತಗೊಳಿಸುವ ಸೂಚನೆಗಳು ಸಿಗಲಾರಂಭಿಸಿವೆ. ರಾಜ್ಯ ಸರಕಾರ ರೈತರ ಹಿತಾಸಕ್ತಿಯನ್ನು ರಕ್ಷಿ ಸಬೇಕೇ ಹೊರತು ಗುತ್ತಿಗೆದಾರರ ಒಳಿತನು ್ನ ರಕ್ಷಿಸಲು ಮುಂದಾಗಬಾರದು ಎಂದರು.
ಮೂಲ ಯೋಜನೆಯನ್ವಯ ಬಲ ದಂಡೆ ಕಾಲುವೆ ನೀರು ಹರಿಸಬೇಕಿ ರುವ ಗ್ರಾಮಗಳಾದ ಉಳ್ಳೂರು, ಸಿದ್ದಾಪುರ, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಕಾವ್ರಾಡಿ, ಹಳ್ನಾಡು (ಒಟ್ಟು 4,920 ಎಕರೆ), ಎಡದಂಡೆ ಕಾಲುವೆ ನೀರು ಹರಿ ಯಬೇಕಾದ ಗ್ರಾಮಗಳಾದ ಹಾಲಾಡಿ, 76, ಕುಳ್ಳಂಜೆ, ಕಕ್ಕುಂಜೆ, ವಂಡಾರು, ಬಿಲ್ಲಾಡಿ, ಶಿರಿಯಾರ, ಹಾಲಾಡಿ 28, ಹಾರ್ದಳ್ಳಿ-ಮಂಡಳ್ಳಿ, ಹಳ್ಳಾಡಿ- ಹರ್ಕಾಡಿ, ಯಡಾಡಿ- ಮತ್ಯಾಡಿ, ಮೊಳಹಳ್ಳಿ, ಹೆಸ್ಕತ್ತೂರು, ಹೊಂಬಾಡಿ- ಮೊಂಡಾಡಿ, ಕೂರ್ಗಿ, ಬೇಳೂರು, ಕೆದೂರು, ಜಪ್ತಿ, ಕಂದಾವರ, ಕಾಳಾವರ, ವಕ್ವಾಡಿ, ಆಸೋಡು, ಕೋಣಿ, ತೆಕ್ಕಟ್ಟೆ, ಬಳ್ಕೂರು, ಹಂಗಳೂರು, ಕೋಟೇಶ್ವರ, ಬಸ್ರೂರು, ಆನಗಳ್ಳಿ (ಒಟ್ಟು 18,626 ಎಕರೆ) ಹಾಗೂ ಏತ ನೀರಾವರಿ ಹರಿಯಬೇಕಾದ ಗ್ರಾಮಗಳಾದ ಹಾಲಾಡಿ 76, ಆವರ್ಸೆ, ಬಿಲ್ಲಾಡಿ, ಅಚ್ಲಾಡಿ, ಕಾವಡಿ, ಶಿರಿಯಾರ, ಶಿರೂರು, ವಂಡಾರು, ಹೆಗ್ಗುಜಂ, ನಡೂರು, ಯಡ್ತಾಡಿ (ಒಟ್ಟು 6,730.74 ಎಕರೆ) ಗ್ರಾಮಗಳು ನೀರಿನಿಂದ ವಂಚಿತವಾಗಿವೆ. ಈ ಯೋಜನಾ ಪ್ರದೇಶಗಳ ರೈತರು ಪಕ್ಷಭೇದ ಮರೆತು ಒಗ್ಗಟ್ಟಾಗಿ ಚರ್ಚಿಸಿ ಮುಂದುವರಿಯಬೇಕು ಎಂದರು.
ಈ ಧರಣಿ ಹಾಗೂ ಸಮಾಲೋಚನಾ ಸಭೆಯಲ್ಲಿ ಭಾಕಿಸಂನ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ, ಉಮೇಶ್ ಶೆಟ್ಟಿ, ಮಲ್ಯಾಡಿ ಜಯರಾಮ ಶೆಟ್ಟಿ ಮುಂತಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News