ದಶಕಗಳ ಬೇಡಿಕೆಗೆ ಕೊನೆಗೂ ಮುಕ್ತಿ : ಕೋಲ್ಚಾರು - ಬಂದಡ್ಕ ರಸ್ತೆ ಲೋಕಾರ್ಪಣೆ
ಸುಳ್ಯ, ಮೇ 1: ಕರ್ನಾಟಕ - ಕೇರಳ ರಾಜ್ಯಗಳ ಬಹಳ ವರ್ಷಗಳ ಬೇಡಿಕೆಯಾದ ಆಲೆಟ್ಟಿ, ಕೋಲ್ಚಾರು, ಕಣಕ್ಕೂರು, ಬಂದಡ್ಕ ಅಂತಾರಾಜ್ಯ ರಸ್ತೆಯು ಅಭಿವೃದ್ಧಿಗೊಂಡು ಲೋಕಾರ್ಪಣೆಗೊಂಡಿದೆ.
ರಸ್ತೆಗಳೆಂದರೆ ರಕ್ತ ಹರಿಯುವ ನಾಡಿಗಳಿದ್ದಂತೆ. ರಕ್ತ ಹರಿದರೆ ಮಾತ್ರ ದೇಹಕ್ಕೆ ಶಕ್ತಿ. ಅದೇ ರೀತಿ ರಸ್ತೆ ಸಂಚಾರ ಸುಗಮವಾದರೆ ಮಾತ್ರ ಊರಿಗೆ ಶಕ್ತಿ ಎಂದು ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೆಳಿದರು.
ಈ ರಸ್ತೆ ಅಭಿವೃದ್ಧಿಯಿಂದ ಎರಡು ರಾಜ್ಯಗಳ ಸಂಭಂದದ ಜತೆಗೆ ವ್ಯವಹಾರದ ಅಭಿವೃದ್ಧಿಗೆ ಪೂರಕವಾಗಲಿದೆ. ಸಾರ್ವಜನಿಕರಿಗೆ ಜನಹಿತ ಉದ್ದೇಶಕ್ಕಾಗಿ ಈ ರಸ್ತೆಯ ಉಪಯೋಗ ಅಗತ್ಯ. ಜೀವ ಜಲ ಉಳಿಸುವ ನಿಟ್ಟಿನಲ್ಲಿ ಒಂದು ಗಿಡವನ್ನು ನೆಟ್ಟು ಪಾಪದಿಂದ ಮುಕ್ತನಾಗು ಎಂಬಘೋಷ ವಾಕ್ಯದೊಂದಿಗೆ ಅಭಿವೃದ್ಧಿ ಜತೆಗೆ ಪರಿಸರ ಉಳಿಸುವ ದೃಷ್ಟಿಕೋನ ನಮ್ಮದಾಗಬೇಕು ಎಂದು ಸಚಿವರು ಹೇಳಿದರು.
ಮಂಗಳೂರು ಲೋಕಸಭಾ ಸದಸ್ಯ ನಳಿನ್ಕುಮಾರ್ ಕಟೀಲ್ ಮಾತನಾಡಿ ಕೋಲ್ಚಾರ್-ಬಂದಡ್ಕ ರಸ್ತೆಯ ಮೂಲಕ ಕಾಸರಗೋಡು ಕರ್ನಾಟಕದ ಕನ್ನಡ ಜನರ ಸಂಬಂಧ ಹೆಚ್ಚಾಗಿದೆ. ರಸ್ತೆಯ ಕನಸುಕಂಡವರಿಗೆ ಇಂದು ಕನಸು ನನಸಾಗಿದೆ. ಹಿಂದಿನ ಬಿಜೆಪಿ ಸರಕಾರ ಮತ್ತು ಈಗಿನ ಕಾಂಗ್ರೆಸ್ ಸರಕಾರದ -ಪ್ರಯತ್ನದ ಮೂಲಕ ಈ ರಸ್ತೆ ಲೋಕಾರ್ಪಣೆಗೊಂಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕ ಎಸ್.ಅಂಗಾರ ವಹಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ರಾಜೀವ ಗಾಂಧಿ ಆರೋಗ್ಯ ವಿ.ವಿ ಸಿಂಡಿಕೇಟ್ ಸದಸ್ಯ ಡಾರಘು, ಮಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ತಾ.ಪಂ.ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ, ತಾ.ಪಂ.ಸದಸ್ಯರಾದ ಪದ್ಮಾವತಿ ಕುಡೆಂಬಿ, ಅಶೋಕ್ ನೆಕ್ರಾಜೆ, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷ ಧನಂಜಯ ಕುಂಚಡ್ಕ ಭಾಗವಹಿಸಿದರು.
ಲೋಕೋಪಯೋಗಿ ಇಂಜಿನಿಯರ್ ಸಣ್ಣೇ ಗೌಡ ಸ್ವಾಗತಿಸಿ, ಶಿಕ್ಷಕ ಅಚ್ಚುತ ಅಟ್ಲೂರು ಮತ್ತು ನ್ಯಾಯವಾದಿ ದಿನೇಶ್ ಅಂಬೆಕಲ್ಲು, ಪುರುಷೋತ್ತಮ ಪೊಡ್ಡನಕೊಚ್ಚಿ ಕಾರ್ಯಕ್ರಮನಿರೂಪಿಸಿದರು.