ನರೇಶ್ ಶೆಣೈ ನಿಕಟವರ್ತಿಯ ನಿವಾಸಕ್ಕೆ ಪೊಲೀಸ್ ದಾಳಿ
ಮಂಗಳೂರು, ಮೇ 4: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ‘ನಮೋ ಬ್ರಿಗೇಡ್’ನ ಸ್ಥಾಪಕಾಧ್ಯಕ್ಷ ನರೇಶ್ ಶೆಣೈಯ ನಿಕಟವರ್ತಿ ವೇದವ್ಯಾಸ ಕಾಮತ್ ಎಂಬವರ ನಿವಾಸಕ್ಕೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.
ನರೇಶ್ ಶೆಣೈ ತಲೆಮರೆಸಿಕೊಂಡಾಗಿನಿಂದ ವೇದವ್ಯಾಸ ಕಾಮತ್ರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ನರೇಶ್ ಶೆಣೈಯ ಇರುವಿಕೆಯನ್ನು ಪತ್ತೆ ಹಚ್ಚಲು ಪೊಲೀಸರು ಇಂದು ಪೂರ್ವಾಹ್ನ ಸುಮಾರು 11 ಗಂಟೆ ಹೊತ್ತಿಗೆ ಮಣ್ಣಗುಡ್ಡೆಯಲ್ಲಿರುವ ವೇದವ್ಯಾಸ್ ಕಾಮತ್ರ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿನಾಯಕ ಬಾಳಿಗಾರನ್ನು ಮಾ.21ರಂದು ಅವರ ನಿವಾಸದ ಎದುರು ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿದ್ದರು. ನರೇಶ್ ಶೆಣೈ ಬಾಳಿಗಾ ಹತ್ಯೆ ಪ್ರಕರಣದ ಸುಪಾರಿ ಕಿಲ್ಲರ್ ಎಂದು ಆರೋಪಿಸಿ ಆತನನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇತ್ತೀಚೆಗೆ ಪ್ರಟಿಭಟನೆಗಳು ನಡೆದಿದ್ದವು.