ನೀರು ಕೇಳಿದವರಿಗೆ ಪೈಪ್ಲೈನ್ ಭಾಗ್ಯ
ಮುಲ್ಕಿ, ಮೇ 5: ಇಲ್ಲಿನ ಪಡು ಪಣಂಬೂರು ಗ್ರಾಪಂ ವ್ಯಾಪ್ತಿಯ ಪಳ್ಳಿಗುಡ್ಡೆ ಪರಿಸರದ ಜನತೆ ದೈನಂದಿನ ಕಾರ್ಯಗಳಿಗೂ ನೀರಿಲ್ಲದೆ ಪರಿತಪಿಸುವಂತಾಗಿದ್ದು, ಗ್ರಾಮ ಪಂಚಾಯತ್ಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಭಾಗದಲ್ಲಿ ಸುಮಾರು 55ರಿಂದ 60 ಮನೆಗಳಿವೆ. ಬೆರಳೆಣಿಕೆಯಷ್ಟು ಮನೆಗಳಲ್ಲಿ ಬಾವಿಗಳಿವೆಯಾದರೂ ಬೇಸಿಗೆ ಆರಂಭವಾಗುತ್ತಲೇ ನೀರು ಇಂಗಿಹೋಗುತ್ತವೆ. ಆ ಬಳಿಕ ಎಲ್ಲಾ ಮನೆಗಳಿಗೂ ಸುಮಾರು 3 ವರ್ಷಗಳ ಹಿಂದೆ ಗ್ರಾಪಂ ಶಾಸಕರ ಅನುದಾನದಲ್ಲಿ ಕೊರೆಸಲಾಗಿರುವ ಒಂದೇ ಒಂದು ಬೋರ್ವೆಲ್ ನೀರಿನ ಬವಣೆಯನ್ನು ನೀಗಿಸಬೇಕಿದೆ.
ಅಲ್ಲದೆ, ಸುಮಾರು 2004ರಲ್ಲಿ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಯ ಫಲವಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಕಳೆದೆರಡು ವರ್ಷಗಳ ಹಿಂದೆ ನೀರಿನ ಸಮಸ್ಯೆ ಹೆಚ್ಚಾಗಿದ್ದಾಗ ತೋಕೂರು ದೇವಸ್ಥಾನ ಪರಿಸರದಲ್ಲಿನ ವಿಶ್ವಬ್ಯಾಂಕ್ ನಿರ್ಮಿಸಿಕೊಟ್ಟಿದ್ದ ಬೋರ್ವೆಲ್ನಿಂದ ಟ್ಯಾಂಕ್ಗೆ ನೀರು ಹರಿಸಿ ಬಳಿಕ ಪಳ್ಳಿಗುಡ್ಡೆ ಪರಿಸರಕ್ಕೆ ಹಂಚುವ ಬಗ್ಗೆ ಚಿಂತನೆ ನಡೆಸಿ ಪೈಪ್ಲೈನ್ನಷ್ಟೇ ಮಾಡಿ ಗ್ರಾಪಂ ಮೋಸಮಾಡಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪರಿಸರದಲ್ಲಿ ಎರಡು ಸರಕಾರಿ ಬಾವಿಗಳಿದ್ದು ಅದರಲ್ಲಿಯೂ ಅಲ್ಪಸ್ವಲ್ಪ ನೀರಿದೆ. ಆದರೆ, ಬಾವಿ ತುಂಬಾ ಕಸಕಡ್ಡಿಗಳು ಬಿದ್ದಿದೆ. ಆದ್ದರಿಂದ ಆ ನೀರು ಕುಡಿಯಲು ಅಥವಾ ಬೇರೆ ಯಾವುದೇ ಕೆಲಸಗಳಿಗೆ ಯೋಗ್ಯವಾಗಿಲ್ಲ. ಬಾವಿಗಳ ಪುನಶ್ಚೇತನಕ್ಕೆ ಗ್ರಾಮ ಪಂಚಾಯತ್ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಂದಾ ಎತ್ತಿ ಬೋರ್ವೆಲ್ ದುರಸ್ತಿ
ಪರಿಸರದಲ್ಲಿ ಇರುವ ಒಂದೇ ಒಂದು ಬೋರ್ವೆಲ್ ಕೆಟ್ಟುಹೋದರೆ ಜನರಿಗೆ ನೀರಿನ ಬದಲಿ ವ್ಯವಸ್ಥೆ ಇಲ್ಲ. ಅಲ್ಲದೆ, ಬೋರ್ವೆಲ್ ಕೊರೆಸಿದ ಅಂದಿನಿಂದ ಇಂದಿನವರೆಗೂ ಬೋರ್ವೆಲ್ ಕೆಟ್ಟುಹೋದರೆ ದುರಸ್ತಿ ಮಾಡಬೇಕಾದ ಪಂಚಾಯತ್ ತಿರುಗಿಯೂ ಈ ಕಡೆ ನೋಡುವುದಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಬಳಿಕ ಪ್ರತೀ ಮನೆಯವರಿಂದ ಚಂದಾ ಎತ್ತಿ ಬೋರ್ವೆಲ್ ದುರಸ್ತಿಮಾಡಬೇಕಾದ ದುಸ್ಥಿತಿ ನಮ್ಮದು ಎಂದು ದೂರಿದ್ದಾರೆ.
ನೀರು ಕೇಳಿದರೆ ಕೇವಲ ಪೈಪ್ಲೈನ್ ಭಾಗ್ಯ!
ಪಳ್ಳಿಗುಡ್ಡೆ ಪರಿಸರದಲ್ಲಿ ನಿತ್ಯ ದೈನಂದಿನ ಕಾರ್ಯಗಳಿಗೆ ನೀರು ಇಲ್ಲದಿದ್ದರೂ ಈವರೆಗೆ ಮೂರು ಮೂರು ಬಾರಿ ಪೈಪ್ಲೈನ್ ಮಾಡಿ ಸರಕಾರದ ಹಣ ದುರುಪಯೋಗ ಪಡಿಸಲಾಗಿದೆ ಎಂದು ಆರೋಪಿಸಿರುವ ಸ್ಥಳೀಯರು, ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಹಾಕಿ ನೀರು ನೀಡುತ್ತಿತ್ತು. ಅದು ಸ್ಥಗಿತಗೊಂಡ ಬಳಿಕ ವಿಶ್ವಬ್ಯಾಂಕ್ ತೋಕೂರು ಪರಿಸರದಲ್ಲಿ ಕೊರೆಸಿದ್ದ ಬೋರ್ವೆಲ್ನಿಂದ ನೀರು ನೀಡುವ ಬಗ್ಗೆ ಚಿಂತಿಸಿ ಮತ್ತೆ ಪೈಪ್ ಲೈನ್ ಮಾಡಲಾಯಿತು. ಆ ಬಳಿಕ ಎರಡು ವರ್ಷಗಳ ಹಿಂದೆ ಜಿಪಂ ವತಿಯಿಂದ ನೀರುಣಿಸುವ ಬಗ್ಗೆ ಮಾತುಗಳು ನಡೆದು ಮತ್ತೊಮ್ಮೆ ಪೈಪ್ ಲೈನ್ ಮಾಡಲಾಯಿತು. ಆದರೆ ಈವರೆಗೂ ಸಮರ್ಪಕವಾಗಿ ಪಂಚಾಯತ್ ಆಗಲೀ, ಜನಪ್ರತಿನಿಧಿಗಳಾಗಲಿ ನೀರು ನೀಡುವ ಗೋಜಿಗೆ ಹೋಗಿಲ್ಲ ಎಂದು ಜನತೆ ದೂರಿದ್ದಾರೆ.
ಜೀವನ ದುಸ್ತರ:
ಪ್ರತೀ ದಿನ ಕೇವಲ ಅರ್ಧಗಂಟೆ ಮಾತ್ರ ನೀರು ಬರುತ್ತದೆ. 5-6 ಬಿಂದಿಗೆಯಷ್ಟು ನೀರು ಸಿಗುತ್ತದೆ. ಆ ನೀರನ್ನೇ ಬಟ್ಟೆ ಒಗೆಯಲು, ಕುಡಿಯಲು ಸೇರಿದಂತೆ ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳಬೇಕಿದೆ. ಮನೆಯಲ್ಲಿ ಸದಸ್ಯರು ಹೆಚ್ಚಾಗಿದ್ದರೆ ಅಂತವರ ವ್ಯಥೆ ಹೇಳಿ ತೀರದಂತಾಗಿದೆ.
ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ, ಮಳೆನೀರು ಇಂಗಿಸುವ ಮತ್ತು ಅಣೆಕಟ್ಟುಗಳಿಗೆ ಕಟ್ಟೆಕಟ್ಟಿ ನೀರು ನಿಲ್ಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ನೀರಿನ ಬವಣೆ ನೀಗಿಸಬಹುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬಂದರೆ ನೀರಿನ ಎಲ್ಲಾ ಸಮಸ್ಯೆಗಳು ಸಂಪೂರ್ಣ ಪರಿಹಾರ ಕಾಣಲಿದೆ. ಕಾಮಗಾರಿ ಶೀಘ್ರ ನಡೆದು ಸಮಸ್ಯೆ ಬೇಗ ಪರಿಹಾರ ಕಾಣಲಿದೆ.
ಮೋಹನ್ದಾಸ್, ಪಡುಪಣಂಬೂರು ಗ್ರಾಪಂ ಅಧ್ಯಕ್ಷ.
ಪಳ್ಳಿಗುಡ್ಡೆ ಪರಿಸರದ ಜನತೆಯ ಬಹು ವರ್ಷಗಳ ಬೇಡಿಕೆಯಾದ 50 ಮೀ ಆಳದ ಓಪನ್ವೆಲ್ ನಿರ್ಮಿಸಿದರೆ ನೀರಿನ ಸಮಸ್ಯೆ ಕೊಂಚ ಮಟ್ಟಿಗೆ ಪರಿಹಾರ ಕಾಣಲು ಸಾಧ್ಯ. ಆದರೆ, ಪಂಚಾಯತ್ ಅಥವಾ ಜನಪ್ರತಿನಿಧಿಗಳು ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.
ವಾಹಿದ್ ಸಾಹೇಬ್, ಸ್ಥಳೀಯರು.