ನೇತ್ರಾವತಿ ನದಿ ತಿರುವು ಯೋಜನೆ ಕುರಿತು ಸಮಾಲೋಚನಾ ಸಭೆ
ಬಂಟ್ವಾಳ, ಮೇ 8: ರೈತರು ಟ್ರಾಕ್ಟರ್ ಮೂಲಕ ಬೆಂಗಳೂರಿಗೆ ಬಂದಾಗ ಅವರನ್ನು ವಿಧಾನಸೌಧಕ್ಕೆ ಕರೆಸಿ ಮಾತುಕತೆ ನಡೆಸುವ ಮೂಲಕ ರೈತರ ಬೇಡಿಕೆಯನ್ನು ಪೂರೈಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಸಮಯದಿಂದ ನೇತ್ರಾವತಿ ತಿರುವು ಯೋಜನೆಯ ವಿರುದ್ಧ ಹೋರಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರನ್ನು ಸೌಜನ್ಯಕ್ಕೂ ಕರೆಸಿ ಚರ್ಚಿಸದಿರುವುದು ದುರದೃಷ್ಟಕರ ಎಂದು ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೇತ್ರಾವತಿ ನದಿ ತಿರುವುಯೋಜನೆಯನ್ನು ವಿರೋಧಿಸಿ ಮೇ 16ರಂದು ನಡೆಯಲಿರುವ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಮೇ 19ರಂದು ನಡೆಯಲಿರುವ ದ.ಕ. ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೇತ್ರಾವತಿ ತಿರುವು ಯೋಜನೆಯ ಹೆಸರನ್ನು ನಾಲ್ಕು ಬಾರಿ ಬದಲಾಯಿಸಿದೆ. ಆದದೂ ಅದರ ಉದ್ದೇಶ ನೇತ್ರಾವತಿ ನದಿಯನ್ನು ತಿರುಗಿಸುವುದೇ ಆಗಿದೆ. ನದಿ ನೀರು ಸಮುದ್ರಕ್ಕೆ ಸೇರುವುದು ಪಾಕೃತಿಕ ನಿಯಮವಾಗಿದೆ ಎಂದ ಅವರು, ಈ ಯೋಜನೆಯನ್ನು ವಿರೋಧಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸಮಿತಿಯ ಮುಖಂಡರಾದ ಎಂ.ಜಿ.ಹೆಗಡೆ, ದಿನಕರ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮುತ್ತಪ್ಪಪೂಜಾರಿ ಬಂಟ್ವಾಳ, ಕೃಷ್ಣಪ್ಪಪೂಜಾರಿ ದೋಟ, ರಾಜಮಣಿ ರಾಮಕುಂಜ, ಗೋಪಾಲ ಅಂಚನ್, ನಾರಾಯಣ ಕುಡ್ವ, ಪುರಸಭಾ ಸದಸ್ಯ ಮುನೀಶ್ ಅಲಿ, ಎಸ್ಡಿಪಿಐ ಮುಖಂಡರಾದ ಮುಸ್ತಾಕ್, ಯೂಸುಪ್ ಆಲಡ್ಕ ಮತ್ತಿತರರು ಮತನಾಡಿದರು.
ಈ ಸಂದರ್ಭ ‘ನೇತ್ರಾವತಿ ಉಳಿವಿಗಾಗಿ ನಮ್ಮ ಬದುಕಿಗಾಗಿ ಹೋರಾಡೋಣ ಬನ್ನಿ’ ಎಂಬ ಘೋಷಣೆಯ ಕರಪತ್ರವನ್ನು ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಸೇಸಪ್ಪಕೋಟ್ಯಾನ್, ಸಮಿತಿ ಪ್ರಮುಖರಾದ ಹನೀಫ್ ಖಾನ್ ಕೋಡಾಜೆ, ಶಶಿರಾಜ್ ಶೆಟ್ಟಿ ಕೊಳಂಬೆ, ಯೋಗೀಶ್ ಕುಮಾರ್ ಜಪ್ಪು, ಜಿ.ಆನಂದ, ವಾಸು ಪೂಜಾರಿ, ಗಂಗಾಧರ, ದೇವದಾಸ ಶೆಟ್ಟಿ, ಸದಾಶಿವ ಬಂಗೇರಾ, ಕೃಷ್ಣ ಅಲ್ಲಿಪಾದೆ, ಪ್ರಭಾಕರ ದೈವಗುಡ್ಡೆ, ಪುರುಷೋತ್ತಮ ಸಾಲ್ಯಾನ್ ಶಂಭೂರು, ಸುಂದರ ರಾವ್, ಲೋಕನಾಥ ಶೆಟ್ಟಿ, ಶರತ್ ಕುಮಾರ್, ಶಾಹುಲ್ ಹಮೀದ್, ಅಮೀರ್ ಅಹ್ಮದ್, ಜಯರಾಮ್ ಸಾಮಾನಿ, ಮಹಾಬಲ ಆಳ್ವ, ಚಂದ್ರಹಾಸ ರೈ, ಕೆ.ಎಚ್.ಅಬೂಬಕರ್, ಆನಂದ ಶಂಭೂರು, ರಾಮದಾಸ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು. ಪಿ.ಎ.ರಹೀಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.