ಬನ್ನಂಜೆ ಗೋವಿಂದಾಚಾರ್ಯರಿಗೆ 80ರ ಅಭಿನಂದನೆ
ಉಡುಪಿ, ಮೇ 9: ಈಶಾಲಾಸ್ಯ ಪ್ರತಿಷ್ಠಾನ ಹಾಗೂ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಸಹಯೋಗದೊಂದಿಗೆ ಡಾ. ಬನ್ನಂಜೆ ಗೋವಿಂದಾಚಾರ್ಯರಿಗೆ 80ರ ಅಭಿನಂದನೆ ಸಮಾರಂಭ ವನ್ನು ದೇವಳದ ಆವರಣದಲ್ಲಿ ಸೋಮವಾರ ಆಯೋಜಿಸ ಲಾಗಿತ್ತು.
ಕಾಸರಗೋಡು ಎಡನೀರು ಮಠದ ಶ್ರೀಕೇಶವಾ ನಂದ ಭಾರತೀ ಸ್ವಾಮೀಜಿ ಬನ್ನಂಜೆಯವರ ‘ಯಾಜ್ಞಿಯಮಂತ್ರೋ ಪನಿಷತ್’, ‘ಶ್ರೀವಿಷ್ಣುಸ್ತುತಿ- ನಖ ಸ್ತುತಿ- ವಾಯುಸ್ತುತಿ’, ‘ಭಗವದ್ಗೀತೆ’, ‘ಕಿಷ್ಕಿಂಧಾಕಾಂಡ’, ‘ಉಡುಪಿ ಆಫ್ ಲಾರ್ಡ್ ಕೃಷ್ಣ’ ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಬನ್ನಂಜೆ ಗೋವಿಂದಾಚಾರ್ಯ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಗಳಿಸಬಹುದಾದ ಬಹಳ ದೊಡ್ಡ ಸಂಪತ್ತು ಅಂದರೆ ಪ್ರೀತಿ. ಅದನ್ನು ಜನರಿಂದ ಸಾಕಷ್ಟು ಪಡೆದುಕೊಂಡಿದ್ದೇನೆ ಎಂದು ಹೇಳಿದರು. ಈ ಸಂದರ್ಭ ಕಸಾಪ ಮುಂಬೈ ಅಧ್ಯಕ್ಷ ಎಚ್.ಬಿ.ಎಲ್.ರಾವ್, ನಾಟಿವೈದ್ಯ ಗುರುರಾಜ ಭಾಗವತ್, ಸಂಶೋಧಕ ಕೆ.ಪಿ.ರಾವ್, ಹೇರಂಜೆ ಕೃಷ್ಣ ಭಟ್, ಗಾಯಕ ಹುಸೇನ ಸಾಬ್, ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಾರಿಜಾಕ್ಷಿ ಭಟ್, ಲಕ್ಷ್ಮೀ ಗುರುರಾಜ್ರಿಗೆ ಜ್ಞಾನ ದೇಗುಲ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಆಶಯ ಭಾಷಣ ಮಾಡಿದರು. ವೀಣಾ ಬನ್ನಂಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.