ನಿಂತಿದ್ದ ಬೈಕ್‌ಗೆ ಟಿಪ್ಪರ್ ಢಿಕ್ಕಿ: ಬೈಕ್ ಸವಾರ ಅಪಾಯದಿಂದ ಪಾರು

Update: 2016-05-10 11:43 GMT

ಉಪ್ಪಿನಂಗಡಿ, ಮೇ 10: ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ನಿಂತಿದ್ದ ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಬೈಕ್ ಟಿಪ್ಪರ್‌ನಡಿಗೆ ಸಿಲುಕಿಕೊಂಡು ಸವಾರ ಅಪಾಯದಿಂದ ಪಾರಾದ ಘಟನೆ ಸೋಮವಾರ ರಾತ್ರಿ 34 ನೆಕ್ಕಿಲಾಡಿ ಗ್ರಾಮದ ಆದರ್ಶನಗರದಲ್ಲಿ ನಡೆದಿದೆ.

ಕರಾಯ ನಿವಾಸಿ ಸಂದೀಪ್ ಅಪಾಯದಿಂದ ಪಾರಾದವರಾಗಿದ್ದಾರೆ. ಸಂದೀಪ್ ತನ್ನ ಬೈಕ್ (ಕೆಎ 21 ಆರ್ 2834)ನಲ್ಲಿ ಪುತ್ತೂರಿಗೆ ಬಂದು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ವೇಳೆ 34ನೆ ನೆಕ್ಕಿಲಾಡಿ ಗ್ರಾಮದ ಆದರ್ಶನಗರದಲ್ಲಿ ಎದುರಿನಲ್ಲಿ ಕಲ್ಲಿನ ಲಾರಿಯೊಂದು ನಿಂತಿದ್ದ ಹಿನ್ನೆಲೆಯಲ್ಲಿ ಅದರ ಹಿಂಬದಿ ಬೈಕ್ ನಿಲ್ಲಿಸಿದ್ದರು. ಇದೇ ವೇಳೆ ಬೈಕ್‌ನ ಹಿಂಬದಿಯಿಂದ ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಹಿಟಾಚಿ ಸಾಗಾಟ ಮಾಡುತ್ತಿದ್ದ ಟಿಪ್ಪರ್(ಕೆಎ 21 ಎ 454) ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಢಿಕ್ಕಿಯಾಗಿ ಬಳಿಕ ಮುಂಬಾಗದಲ್ಲಿ ನಿಂತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಟಿಪ್ಪರ್‌ನಡಿಗೆ ಸಿಲುಕಿಕೊಂಡಿದ್ದು ಸವಾರ ಸಂದೀಪ್ ತಕ್ಷಣ ಬೈಕ್‌ನಿಂದ ಕೆಳಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆ ಸಂಚಾರಕ್ಕೆ ಅಡಚಣೆ:

ಘಟನೆಯಿಂದ ಉಪ್ಪಿನಂಗಡಿ-ಪುತ್ತೂರು ರಸ್ತೆಯಲ್ಲಿ ಸುಮಾರು ಅರ್ಧತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಉಪ್ಪಿನಂಗಡಿ ಎಸ್ಸೈ ತಿಮ್ಮಪ್ಪ ಸ್ಥಳಕ್ಕೆ ಆಗಮಿಸಿ ಟಿಪ್ಪರ್‌ನಡಿ ಸಿಲುಕಿದ್ದ ಬೈಕ್‌ನ್ನು ತೆರವುಗೊಳಿಸಿ ಬಳಿಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News