ಮೇ 13,14ರಂದು ವಿವೇಕಾನಂದ ಕಾಲೇಜ್‌ನಲ್ಲಿ ರಾಷ್ಟ್ರೀಯ ವಿಚಾರಸಂಕಿರಣ

Update: 2016-05-11 15:30 GMT

ಪುತ್ತೂರು, ಮೇ 11: ಹಸಿರು ಶಕ್ತಿಯ ಸಂಭಾವ್ಯತೆಗಳು ಮತ್ತು ಬಳಕೆ (ಗ್ರೀನ್ ಎನರ್ಜಿ: ಪೊಟೆನ್ಶಿಯಲ್ಸ್ ಆ್ಯಂಡ್ ಅಪ್ಲಿಕೇಶನ್ಸ್) ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 13, 14ರಂದು ನಡೆಯಲಿದೆ ಎಂದು ಕಾಲೇಜಿನ ಮಾಧ್ಯಮ ವಿಭಾಗದ ಹರಿಪ್ರಸಾದ್ ಡಿ. ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮೇ 13ರಂದು ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಕರ್ನಾಟಕ ಪವರ್ ಕಾರ್ಪೊರೇಷನ್‌ನ ಸೊಲಾರ್ ಟೆಕ್ನಾಲಜಿಯ ರಾಷ್ಟ್ರೀಯ ತರಬೇತಿ ಕೇಂದ್ರದ ನಿರ್ದೇಶಕ ಡಾ. ನಾಗನಗೌಡ ಚಾಲನೆ ನೀಡಲಿದ್ದಾರೆ. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ನಾಗನಗೌಡ, ಸುರತ್ಕಲ್ ಎನ್‌ಐಟಿಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡಾ. ಸತ್ಯಭಾಮಾ ಭಟ್ ಹಾಗೂ ಡಾ. ವೀರಶೆಟ್ಟಿ ಗುಂಟಾಪುರೆ, ಜಯಪುರದ ಟರ್ಬೋ ಟರ್ಬೈನ್ಸ್ ಸಂಸ್ಥೆಯ ಜಿ.ಕೆ. ರತ್ನಾಕರ್ ಸಂಪನ್ಮೂಲ ವ್ಯಕ್ತಿಗಳಾಗಿರುವರು ಎಂದು ತಿಳಿಸಿದರು.

ನವೀಕರಿಸಬಹುದಾದ ಇಂಧನದ ಮೂಲಗಳಾದ ಸಮುದ್ರದ ಅಲೆಯುಬ್ಬರ, ಸೌರ ಶಕ್ತಿ, ಪವನ ಶಕ್ತಿ, ಬಯೋ ಗ್ಯಾಸ್ ಮತ್ತು ಬಯೋ ಮಾಸ್ ಮುಂತಾದವುಗಳ ನಿರ್ವಹಣೆ ಹಾಗೂ ಪರಿಣಾಮಕಾರಿ ಬಳಕೆಯ ಕುರಿತು ಬೆಳಕು ಚೆಲ್ಲುವುದು ಕಾರ್ಯಕ್ರಮದ ಉದ್ದೇಶ. ಎಸ್‌ಐಟಿ ವಳಚ್ಚಿಲ್‌ನ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಆರ್.ಕೆ. ಹೆಗ್ಡೆ ಮತ್ತು ಸುಳ್ಯ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಉಮಾಶಂಕರ್ ಕೆ.ಎಸ್. ಪ್ರಬಂಧ ಮಂಡನೆ ಮಾಡುವರು. ಸುಮಾರು 26 ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಡುತ್ತವೆ. ಅವನ್ನು ಮುದ್ರಿಸಿ ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗುವುದು. ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಸುಮಾರು 200 ಮಂದಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮೇ 14ರಂದು ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು, ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗ ಮುಖ್ಯಸ್ಥ ಡಾ. ಉಮಾಶಂಕರ್ ಕೆ.ಎಸ್. ಅತಿಥಿಯಾಗಿರುವರು. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿಶ್ವೇಶ್ವರ ಭಟ್ ಬಿ. ಅಧ್ಯಕ್ಷತೆ ವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಉಷಾ ಕಿರಣ್, ವಿಚಾರ ಸಂಕಿರಣ ಕಾರ್ಯಕ್ರಮ ಸಂಯೋಜಕ ಪ್ರೊ. ದೀಪಕ್ ಕೆ.ಬಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News