15ರಂದು ‘ಅಮ್ಮೆಂಬಳ ನಾವಡ ಶತಮಾನೋತ್ಸವ’
ಮಂಗಳೂರು, ಮೇ 11: ಅಮ್ಮೆಂಬಳ ಶಂಕರ ನಾರಾಯಣ ನಾವಡ ಶತಮಾ ನೋತ್ಸವ ಸಮಾರಂಭ ಬಂಟ್ವಾಳದ ಮೊಡಂಕಾಪು ಏರ್ಯಬೀಡು ರಾಜಾಂ ಗಣದಲ್ಲಿ ಮೇ 15ರಂದು ನಡೆಯಲಿದೆ ಎಂದು ನಾವಡ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮಾರಂಭ ವನ್ನು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಉದ್ಘಾಟಿಸಲಿದ್ದು, ಅಮ್ಮೆಂಬಳ ಶಂಕರ ನಾರಾಯಣ ನಾವಡರ ಸಮಗ್ರ ಸಾಹಿತ್ಯ ಸಂಪುಟವನ್ನು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾ ನಾಥ ಬಿಡುಗಡೆ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಮುಂಬೈನ ಉದ್ಯಮಿ ವಿವೇಕ ಶೆಟ್ಟಿ, ಅತಿಥಿಗಳಾಗಿ ಭಾಗವಹಿಸಲಿದ್ದು, ಏರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ 2ರಿಂದ ಅಮ್ಮೆಂಬಳ ಸಾಹಿತ್ಯ: ಚಿಂತನಗೋಷ್ಠಿ ಡಾ.ನಾ.ಮೊಗಸಾಲೆ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅಮ್ಮೆಂಬಳರ ಪದ್ಯ ಸಾಹಿತ್ಯ ಕುರಿತು ಡಾ.ಗಿರೀಶ್ ಭಟ್ ಅಜಕ್ಕಳ, ಗದ್ಯ ಸಾಹಿತ್ಯ ಕುರಿತು ಡಾ.ಜನಾರ್ದನ ಭಟ್ ಮಾತನಾಡ ಲಿದ್ದಾರೆ.
ಅಮ್ಮೆಂಬಳ ಕಾವ್ಯ ಗಾಯನವನ್ನು ಜಯಲಕ್ಷ್ಮೀ ಶಾಸ್ತ್ರಿ ಮಂಗಳೂರು ಮತ್ತು ಪಲ್ಲವಿ ಸುಧೀರ್ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಕೆ.ಜಯರಾಮ ಶೆಟ್ಟಿ, ಅಮ್ಮೆಂಬಳರ ಪುತ್ರ ಪ್ರೊ.ಎ.ವಿ.ನಾವಡ ಸುದ್ದಿಗೋಷ್ಠಿಯಲ್ಲಿದ್ದರು.
ಡಾ.ಶಾಸ್ತ್ರಿ, ಡಾ.ಅಮೃತ ಸೋಮೇಶ್ವರರಿಗೆ ಪ್ರಶಸ್ತಿ
ಅಮ್ಮೆಂಬಳ ಶಂಕರನಾರಾಯಣ ನಾವಡ- ಪಾರ್ವತಿ ನಾವಡ ಶತಮಾನದ ಪ್ರಶಸ್ತಿಯನ್ನು ಖ್ಯಾತ ಸಂಶೋಧಕ ಡಾ.ವೆಂಕಟಾಚಲ ಶಾಸ್ತ್ರಿ ಯವರಿಗೆ ನೀಡಲಾಗುವುದು. ಈ ಪ್ರಶಸ್ತಿಯು 20 ಸಾವಿರ ರೂ., ಫಲಕ, ಫಲಪುಷ್ಪ ಒಳಗೊಂಡಿರುತ್ತದೆ. ಅಮ್ಮೆಂಬಳ ನಾವಡ ವಾರ್ಷಿಕ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ 10 ಸಾವಿರ ರೂ. ನೀಡಿ ಗೌರವಿಸಲಾಗುವುದು.
ಎರಡೂ ಪ್ರಶಸ್ತಿಗಳನ್ನೂ ಸಮಾರೋಪ ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಪ್ರದಾನ ಮಾಡಲಿದ್ದಾರೆ. ವಿಮರ್ಶಕ ಪ್ರೊ.ಎಂ.ರಾಮಚಂದ್ರ ಸಮಾರೋಪ ಭಾಷಣ ಮಾಡಲಿದ್ದು, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅಭಿನಂದನಾ ಭಾಷಣ ಮಾಡುವರು. ಶಾಸಕ ಜೆ.ಆರ್.ಲೋಬೊ, ವಿಶ್ವ ಕೊಂಕಣಿ ಕೇಂದ್ರ ನಿರ್ದೇಶಕ ಬಸ್ತಿ ವಾಮನ ಶೆಣೈ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅತಿಥಿಗಳಾಗಿರುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು.