ಕೇರಳ ವಿಧಾನಸಭಾ ಚುನಾವಣೆ: ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಅಬ್ದುಲ್ ರಝಾಕ್ ಪರ ಮತ ಯಾಚನೆ
ಮಂಜೇಶ್ವರ, ಮೇ 14: ಮತ ಸೌಹಾರ್ದತೆಯ ನಾಡಾಗಿರುವ ಮಂಜೇಶ್ವರದಲ್ಲಿ ಯಾವತ್ತೂ ಕೋಮುವಾದಿ ಶಕ್ತಿಗಳು ತಮ್ಮ ನೀಚ ಬೀಜ ಬಿತ್ತಲು ಇಲ್ಲಿನ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ಅವಕಾಶ ನೀಡಬಾರದು. ಈ ಮೂಲಕ ಇಲ್ಲಿನ ದೀರ್ಘ ವರ್ಷಗಳ ಸೌಹಾರ್ದತೆಯ ಇತಿಹಾಸವನ್ನು ಮತ್ತೆ ಉಳಿಸಿಕೊಂಡು ಬರಬೇಕಾಗಿದೆ ಎಂದು ಸಚಿವ ಬಿ ರಮಾನಾಥ ರೈ ಕರೆ ನೀಡಿದರು.
ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಅಬ್ದುಲ್ ರಝಾಕ್ ಪರ ಮಜಿರ್ಪಳ್ಳದಲ್ಲಿ ನಡೆದ ಮತ ಯಾಚನಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ರಾಜಕೀಯ ಸ್ವಾರ್ಥ ಹಾಗೂ ಸ್ವಹಿತಾಸಕ್ತಿಗಾಗಿ ಅಮಾಯಕರನ್ನು ವಿನಾ ಕಾರಣ ಬಲಿಪಶು ಮಾಡುವ ನೀಚ ಇತಿಹಾಸ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳ ಬೆನ್ನಿಗಿದ್ದು, ಇದನ್ನು ಇಲ್ಲಿನ ಪ್ರಜ್ಞಾವಂತ ಮತದಾರರು ಅರ್ಥೈಸಿಕೊಳ್ಳಲು ವಿಫಲರಾಗಲಾರರು ಎಂಬುದು ನಿಸ್ಸಂಶಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಕರ್ನಾಟಕದಲ್ಲಿ ಒಂದು ಬಾರಿ ಆಡಳಿತ ನಡೆಸುವ ಅವಕಾಶ ಪಡೆದ ಬಿಜೆಪಿಗರು ಮಾಡಬಾರದ್ದನ್ನೆಲ್ಲಾ ಮಾಡಿ ಈಗಾಗಲೇ ಇಡೀ ದೇಶದ ಜನತೆಯಿಂದ ಉಗಿಸಿಕೊಂಡಿರುವುದು ತಿಳಿದಿರುವ ವಿಚಾರ. ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲೇ ಮುಖ್ಯಮಂತ್ರಿ ಜೈಲಿಗೆ ಹೋದದ್ದಲ್ಲದೆ ತನ್ನ ಸಚಿವ ಸಂಪುಟದ ಬಹುಪಾಲು ಮಂತ್ರಿಗಳು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಅನುಭವಿಸಿದ್ದಾರೆ. ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಚಿವರು ಬ್ಲೂಫಿಲಂ ವೀಕ್ಷಿಸುವ ಮೂಲಕ ತಮ್ಮ ನೀಚ ಸಂಸ್ಕೃತಿಯನ್ನು ಜಗಜ್ಜಾಹೀರುಗೊಳಿಸಿರುವುದನ್ನೂ ಜನ ಇನ್ನೂ ಮರೆತಿಲ್ಲ. ಜೈಲಿನೊಳಕ್ಕೆ ಮಾರಕಾಸ್ತ್ರ ರವಾನಿಸಿ ಕೊಲೆಗೆ ಪ್ರೋತ್ಸಾಹ ನೀಡಿದವರೂ ಇದೇ ಬಿಜೆಪಿಯ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರು ಇದೀಗ ಜೈಲು ಕಂಬಿ ಎಣಿಸುತ್ತಿರುವುದನ್ನು ಉದಾಹರಿಸಿದ ಸಚಿವ ರೈ ಇಂತಹ ನೀಚ ಪಕ್ಷದ ಪ್ರತಿನಿಧಿಗಳಿಗೆ ಮಂಜೇಶ್ವರದ ಜನತೆ ಖಾತೆ ತೆರೆಯಲು ಅವಕಾಶ ನೀಡಬಾರದು.
ಕಾಂಗ್ರೆಸ್ ಮೈತ್ರಿಕೂಟವಾದ ಯುಡಿಎಫ್ ಅಭ್ಯರ್ಥಿ ರಝಾಕ್ ಅವರನ್ನು ಪ್ರಚಂಡ ಬಹುಮತದಿಂದ ಚುನಾಯಿಸಿ ಕೇರಳ ವಿಧಾನಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕಾಂಗ್ರೆಸ್ನ ನಾಯಕರಾದ ಸಿ ಎಂ ಇಬ್ರಾಹಿಂ, ಯು ಟಿ ಖಾದರ್, ಬಿ ಎ ಮೊದಿನ್ ಬಾವಾ, ಎಂ ಎಸ್ ಮುಹಮ್ಮದ್, ಬಿ ಎಂ ಅಬ್ಬಾಸ್ ಅಲಿ, ಯೂಸುಫ್ ಕರಂದಾಡಿ, ಹೇಮನಾಥ ಶೆಟ್ಟಿ ಕಾವು, ರಿಯಾರ್ ಹುಸೈನ್ ಬಂಟ್ವಾಳ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡರು. ಚಿತ್ರ : 14ಬಿಎನ್ಟಿಪಿಎಚ್1 : ಮತದಾರರನ್ನುದ್ದೇಶಿಸಿ ಸಚಿವ ರಮಾನಾಥ ರೈ ಮಾತನಾಡಿದರು.