ಕೃಷ್ಣಾಪುರ : ತಮಾಮ್ ಅಪಾರ್ಟ್ ಮೆಂಟಿಗೆ ಶಿಲಾನ್ಯಾಸ
ಸುರತ್ಕಲ್, ಮೇ 16: ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು , ಮಹಾನಗರ ಪಾಲಿಕೆಯ 60 ವಾರ್ಡ್ ಗಳಲ್ಲಿ 23 ವಾರ್ಡ್ ಗಳು ನನ್ನ ಕ್ಷೇತ್ರದಲ್ಲಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ವಿಶಾಲವಾದ ನೀಲಿ ನಕ್ಷೆಯೊಂದಿಗೆ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ, ವಿದ್ಯುತ್, ನೀರು ಇಂತಹ ಮೂಲಭೂತ ಸೌಕರ್ಯಗಳೊಂದಿಗೆ ಸ್ಟೇಡಿಯಮ್, ಮಕ್ಕಳ ಪಾರ್ಕ್, ಸುಸಜ್ಜಿತ ಮಾರುಕಟ್ಟೆ, ಆರೋಗ್ಯ ಕೇಂದ್ರ ಮುಂತಾದ ಸವಲತ್ತುಗಳು ನಿರ್ಮಿಸಲ್ಪಡುವುದರೊಂದಿಗೆ ಸುರತ್ಕಲ್ ಪರಿಸರ ಒಂದು ಮಾದರಿ ಉಪನಗರವಾಗಿ ರೂಪುಗೊಳ್ಳಲಿದೆ. ಈ ಪ್ರದೇಶದಲ್ಲಿ ತಮಾಮ್ ನಂತಹ ಸುಸಜ್ಜಿತ ವಸತಿ ಸಂಕೀರ್ಣ ಗಳು ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ. ಎ. ಮೊಯ್ದಿನ್ ಬಾವ ಹೇಳಿದರು.
ಅವರು ಸುರತ್ಕಲ್ ಸಮೀಪ ಕೃಷ್ಣಾಪುರದಲ್ಲಿ ನಿರ್ಮಾಣವಾಗಲಿರುವ "ತಮಾಮ್" ಅಪಾರ್ಟ್ ಮೆಂಟಿಗೆ ಶಿಲಾನ್ಯಾಸ ಮಾಡಿ ಮಾತಾಡುತ್ತಿದ್ದರು.
ತಮಾಮ್ ಅಪಾರ್ಟ್ ಮೆಂಟ್ ಮೂವತ್ತು ಸೆಂಟ್ಸ್ ವಿಶಾಲ ನಿವೇಶನದಲ್ಲಿ ನಾಲ್ಕು ಮಹಡಿಯ ಸಂಕೀರ್ಣವಾಗಿ ನಿರ್ಮಾಣವಾಗುತ್ತಿದ್ದು ಇದರಲ್ಲಿ 28 ವಸತಿ ಗೃಹಗಳಿರುತ್ತದೆ.
24 ಗಂಟೆ ನೀರು, ವಿದ್ಯುತ್ ಪೂರೈಕೆ ವ್ಯವಸ್ಥೆ ಇದ್ದು ಮಕ್ಕಳ ಪಾರ್ಕ್ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಸ್ ನಿಲ್ದಾಣ, ಶೈಕ್ಷಣಿಕ ಸಂಸ್ಥೆಗಳು, ಆರಾಧನಾಲಯಗಳೆಲ್ಲವೂ ಅತೀ ಹತ್ತಿರದಲ್ಲಿರುವ ಈ ಅಪಾರ್ಟ್ ಮೆಂಟ್ ಸುಂದರ ವಿನ್ಯಾಸವನ್ನು ಹೊಂದಿದ್ದು ಮದ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಯನ್ನೂ ನಿಗದಿಗೊಳಿಸಲಾಗಿದೆ ಎಂದು ಸಂಸ್ಥೆಯ ಪಾಲುದಾರ ಮುಹಮ್ಮದ್ ರಫೀಕ್ ಕೃಷ್ಣಾಪುರ ವಿವರಿಸಿದರು.
ಕೃಷ್ಣಾಪುರದ ಖಾಝಿ ಅಲ್ ಹಾಜ್ ಇ. ಕೆ. ಇಬ್ರಾಹಿಮ್ ಮದನಿ ದುಆ ನೆರವೇರಿಸಿದರು. ಮಂಜೇಶ್ವರದ ಬದ್ರುದ್ದೀನ್ ತಂಙಳ್ ಬ್ರೋಷರ್ ಬಿಡುಗಡೆ ಮಾಡಿದರು. ಕಾರ್ಪೊರೇಟರ್ ತಿಲಖ್ ರಾಜ್, ಅಯಾಝ್, ಉಪ್ಪಳದ ಹನೀಫ್ ಗೋಲ್ಡ್ ಕಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಸಿದ್ದರು.
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಸನಬ್ಬ ಮಂಗಳಪೇಟೆ, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಪಿ. ಉಸ್ಮಾನ್, ಬಾವಾಕ ಚೊಕ್ಕಬೆಟ್ಟು, ಹಮೀದ್ ಅಬಯಾಸ್, ಅಬ್ದುಲ್ ಹಮೀದ್ ಮಾವರಿ, ಇಬ್ರಾಹಿಮ್ ಪಿ. ಎಸ್., ಇಂಜಿನಿಯರ್ ಶಾಫಿ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಮುಹಮ್ಮದ್ ರಫೀಕ್ ಸ್ವಾಗತಿಸಿ ಅಬ್ಬೂ ತಮಾಮ್ ಧನ್ಯವಾದ ಸಲ್ಲಿಸಿದರು. ಮುಬಾರಕ್ ಪಿ. ಎಸ್. ರವರು ನೆನಪಿನ ಕಾಣಿಕೆಗಳನ್ನು ನೀಡಿದರು. ಬಿ. ಎ. ಮುಹಮ್ಮದ್ ಆಲಿ ಕಾರ್ಯಕ್ರಮ ನಿರೂಪಿಸಿದರು.