ಎತ್ತಿನಹೊಳೆ ಯೋಜನೆ ಬಗ್ಗೆ ಸಮಗ್ರ ತನಿಖೆಯಾಗಬೇಕು: ಸಿಪಿಐ
ಮಂಗಳೂರು, ಮೇ 16: ಎತ್ತಿನಹೊಳೆ ಯೋಜನೆ ಬಗ್ಗೆ ಅನೇಕ ಸಂಶಯಗಳು ಎದ್ದು ಕಾಣುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಿಪಿಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಎತ್ತಿನಹೊಳೆ ಯೋಜನೆಯ ಬಗ್ಗೆ ತನಿಖೆಗೆ ಸರಕಾರ ಮತ್ತೊಂದು ತಜ್ಞರ ಸಮಿತಿ ರಚಿಸಬೇಕು. ಆ ಸಮಿತಿಯ ಶಿಫಾರಸುಗಳ ಮೇಲೆ ಯೋಜನೆ ರೂಪಿತವಾಗಬೇಕು ಎಂದು ಸಿಪಿಐ ಆಗ್ರಹಿಸಿದೆ.
ಎತ್ತಿನಹೊಳೆ ಯೋಜನೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿರುವುದರಿಂದ ಅದನ್ನು ಕೈಬಿಡಬೇಕೆಂಬ ಒತ್ತಾಯವನ್ನು ನಾವು ಸಮರ್ಥಿಸುವುದಿಲ್ಲ ಎಂದು ಹೇಳಿದೆ.
ಕುಡಿಯುವ ನೀರು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಅದಕ್ಕಾಗಿ ಯೋಜನೆಗಳ ರೂಪಿತವಾಗಬೇಕು. ಆದರೆ ಅಂತಹ ಯೋಜನೆಗಳು ಒಂದು ಪ್ರದೇಶಕ್ಕೆ ಸಹಾಯಕವಾಗಿ ಇನ್ನೊಂದು ಪ್ರದೇಶಕ್ಕೆ ಮಾರಕವಾಗಿರಬಾರದು. ಆದುದರಿಂದ ಯಾವುದೇ ಯೋಜನೆಗಳನ್ನು ಕಾರ್ಯರೂಪಗೊಳಿಸುವ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆ ಕೂಲಂಕುಷ ಪರಿಶೀಲನೆಯಾಗಬೇಕು. ಶಾಶ್ವತ ಜಲನೀತಿಯನ್ನು ರೂಪಿಸಿ, ಎಲ್ಲಾ ಪ್ರದೇಶಗಳಿಗೂ ಸರಿಯಾದ ಕುಡಿಯುವ ನೀರನ್ನು ಒದಗಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ ದ ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಕುಕ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.