ಸುಳ್ಯ: ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆ

Update: 2016-05-17 13:46 GMT

ಸುಳ್ಯ, ಮೇ 17: ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಸುಳ್ಯ ಹೊರವಲಯದ ಕಾಂತಮಂಗಲ ಎಂಬಲ್ಲಿ ಮಂಗಳವಾರ ಸಂಜೆ ಸಂವಿಸಿದೆ.

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ರವಿರಾಜ ಎಂಬವರ ಪತ್ನಿ ಕುಸುಮಾವತಿ (40) ತನ್ನ ಮಕ್ಕಳಾದ ಲಿಖಿತಾ, ರಕ್ಷಿತಾ ಹಾಗೂ ಸುಜನ್ ಅವರೊಂದಿಗೆ ಮನೆ ಸಮೀಪದ ಪಯಸ್ವಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಅಪರಾಹ್ನ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದ್ದು, ಸಂಜೆ ವೇಳೆಗೆ ಪರಿಸರದವರಿಗೆ ವಿಷಯ ತಿಳಿಯಿತು. ಬಳಿಕ ನಾಲ್ಕೂ ಮೃತದೇಹಗಳನ್ನು ಮೇಲೆತ್ತಲಾಯಿತು.

ಪುತ್ರಿಯರಾದ ಲಿಖಿತಾ ಹಾಗೂ ರಕ್ಷಿತಾರನ್ನು ನೀರಿಗೆ ತಳ್ಳಿ ಬಳಿಕ ಸುಜನ್ ನೊಂದಿಗೆ ಕುಸುಮಾ ನೀರಿಗೆ ಹಾರಿರಬೇಕೆಂದು ಶಂಕಿಸಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದು ಊರವರು ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದ್ದು, ಮುದ್ದು ಕಂದಮ್ಮಗಳು ಹಾಗೂ ಮಹಿಳೆಯ ಸಾವಿನಿಂದ ದಿಗ್ಭ್ರಾಂತರಾಗಿದ್ದರೆ.

ರವಿರಾಜ್ ಸುಳ್ಯದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದು, ಮಂಗಳವಾರವೂ ಕರ್ತವ್ಯಕ್ಕೆ ತೆರಳಿದ್ದರು. ಹಿರಿಯ ಪುತ್ರಿ ಲಿಖಿತಾಗೆ ನಾಲ್ಕೂವರೆ ವರ್ಷ ಪ್ರಾಯ. ಸುಳ್ಯದ ರೋಟರಿ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿನಿ. ಎರಡನೆ ಪುತ್ರಿ ರಕ್ಷಿತಾಗೆ ಮೂರು ವರ್ಷ ಹಾಗೂ ಕಿರಿಯ ಪುತ್ರ ಸುಜನ್‌ಗೆ ಎರಡು ವರ್ಷ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News