ಪಿಲಿಕುಳದಲ್ಲಿ ಇಂದಿನಿಂದ ‘ವಸಂತೋತ್ಸವ-2016’ ಕಾರ್ಯಕ್ರಮ
ಮಂಗಳೂರು, ಮೇ 20: ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ವತಿಯಿಂದ ಮಾವು-ಹಲಸು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ವಸಂತೋತ್ಸವ -2016’ ಮೇ 21ಮತ್ತು 22ರಂದು ಪಿಲಿಕುಳ ಅರ್ಬನ್ ಹಾಥ್ನಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
*ಬಾದಾಮಿ, ಆಲ್ಫೊನ್ಸ್, ಮಲ್ಲಿಕಾ, ನೀಲಂ, ಮುಂಡಪ್ಪ, ತೋತಾಪುರಿ, ರತ್ನಗಿರಿ ಮಾವುಗಳ ಜೊತೆಗೆ ಸ್ಥಳೀಯವಾಗಿ ದೊರೆಯುವ ನೆಕ್ಕರೆ, ಗದ್ದೆ ಮಾವು, ಬಜ್ಪೆ, ಬಂಟ್ವಾಳ ಪ್ರದೇಶದಲ್ಲಿ ದೊರೆಯುವ ಸಕ್ಕರೆ ಮಾವು ಹಾಗೂ ಇತರ ಕಾಡು ಜಾತಿಯ ಮಾವಿನ ತಳಿಗಳು ಪ್ರದರ್ಶನದಲ್ಲಿ ಇರಲಿದೆ ಎಂದು ಅವರು ವಿವರಿಸಿದರು.ಲಸಿನ ಹಣ್ಣುಗಳ ವೈವಿಧ್ಯ: ಮೇಳದಲ್ಲಿ ಹಲಸಿನ ಪ್ರಮುಖ ತಳಿಗಳ ಜೊತೆಗೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ದೇಶ ವಿದೇಶಗಳ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಚ್.ಆರ್. ಮಾಹಿತಿ ನೀಡಿದರು.
*ಹಣ್ಣುಗಳ ಹಾಗೂ ಇತರ ಖಾದ್ಯ ಮಾರಾಟ: ಗೇರುಹಣ್ಣಿನ ಐಸ್ಕ್ರೀಂ, ಕೆ.ಎಂ.ಎಫ್. ಹಾಲಿನ ಉತ್ಪನ್ನ, ಕ್ಯಾಂಪ್ಕೊ ಉತ್ಪನ್ನಗಳು, ಔಷಧೀಯ ಹಣ್ಣು, ಸಸ್ಯಗಳು, ಸಾವಯವ ತರಕಾರಿ, ಅನಾನಸು, ಪುನರ್ಪುಲಿ, ಮಂಥ್ಪುಳಿ, ಕೇಪುಳ, ಕರಂಡೆ, ನೇರಳೆ, ಕುಂಟಾಲ್ ಇತ್ಯಾದಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಯೋಗೇಶ್ ತಿಳಿಸಿದರು.
ಮೇಳದಲ್ಲಿ ಅತ್ಯಂತ ದೊಡ್ಡ ಹಣ್ಣು (ಮಾವು ಹಲಸು,ಅನಾನಸು)ಪ್ರದರ್ಶಿಸಿದ ಮಾಲಕರಿಗೆ ವಿಶೇಷ ಬಹುಮಾನ ಹಾಗೂ ಮಾವಿನಹಣ್ಣಿನ ಬೀಜವನ್ನು ದೂರ ಎಸೆಯುವವರಿಗೆ ಬಹುಮಾನ ನೀಡಲಾಗುವುದು ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎನ್.ವಿ. ಪ್ರಭಾಕರ ಶರ್ಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಸದಸ್ಯರಾದ ಚಂದ್ರಶೇಖರ ಚೌಟ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ವಿಜ್ಞಾನಿ ಡಾ.ಸೂರ್ಯಪ್ರಕಾಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.