ನಾಳೆ ‘ನೇಮೊದ ಬೂಳ್ಯ’ ಚಿತ್ರದ ಧ್ವನಿಸುರುಳಿ ಬಿಡುಗಡೆ
ಮಂಗಳೂರು, ಜೂ. 24: ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶಿಸಿದ ‘ನೇಮೊದ ಬೂಳ್ಯ’ ತುಳು ಸಿನೆಮಾದ ಧ್ವನಿಸುರುಳಿ ಬಿಡುಗಡೆ ಜೂ.26ರಂದು ಸಂಜೆ 4:30ಕ್ಕೆ ಮಂಗಳೂರು ಪುರಭವನದಲ್ಲಿ ಜರಗಲಿದೆ ಎಂದು ರೋಹಿತ್ ಉಳ್ಳಾಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಇನ್ನೂರು ವರ್ಷಗಳ ಹಿಂದೆ ಪುತ್ತೂರು ಸಮೀಪದ ಬೆಟ್ಟಂಪಾಡಿ ಎಂಬಲ್ಲಿ ನಡೆದ ಸತ್ಯಘಟನೆಯನ್ನು ಆಧರಿಸಿದ ಕತೆಯನ್ನು ನಾಟಕಕಾರ ಬಿ.ಕೆ.ಗಂಗಾಧರ ಕಿರೋಡಿಯನ್ ಈಗಾಗಲೇ ನಾಟಕ ರೂಪವನ್ನಾಗಿ ‘ನೇಮೊದ ಬೂಳ್ಯ’ ಎಂಬುದಾಗಿ ರಂಗ ಪರದೆಗೆ ತಂದಿದ್ದರು. ಇದೀಗ ಅದೇ ಕತೆ ಸಿನೆಮಾ ಆಗಲಿದೆ. ಪರತಿಮಂಗಣೆ ಪಾಡ್ದನದ ಆಧಾರಿತ ಕತೆಯಾದ ‘ನೇಮೊದ ಬೂಳ್ಯ’ ಸಿನೆಮಾ ಚಿತ್ರೀಕರಣಗೊಂಡು ಈಗ ಬಿಡುಗಡೆಯ ಹಂತದಲ್ಲಿದೆ ಎಂದರು.
ನಿರ್ಮಾಪಕ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ಮಾತನಾಡಿ, ಕಾರ್ಯಕ್ರಮದಲ್ಲಿ ರಂಗಭೂಮಿ-ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಶೀಲ ಮರೋಳಿ ಹಾಗೂ ಅಂತಾರಾಷ್ಟ್ರೀಯ ಪವರ್ಲಿಫ್ಟರ್ ಸುಪ್ರೀತಾ ಪೂಜಾರಿಯವರನ್ನು ಸಮ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಬಿ.ಕೆ.ಗಂಗಾಧರ್ ಕಿರೋಡಿಯನ್, ಹಿರಿಯ ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೊ, ಚಿತ್ರನಟ ಪ್ರದೀಪ್ಚಂದ್ರ ಉಪಸ್ಥಿತರಿದ್ದರು.