ಹಲ್ಲೆ ಪ್ರಕರಣದ ನಾಲ್ವರು ಆರೋಪಿಗಳ ಸೆರೆ

Update: 2016-06-28 16:19 GMT

ಮಂಗಳೂರು, ಜೂ.28: ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಬಂದರು ನಿವಾಸಿ ಹಬೀಬ್ ರಹಿಮಾನ್ (18)ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಇಂದು ಬಂದರು ಠಾಣೆಯ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಕೊಡಿಯಾಲ್‌ಬೈಲ್‌ನ ಶಿಶಿರ್ ಪೂಜಾರಿ (23), ಅರ್ಕುಳದ ಧನ್‌ರಾಜ್(22), ತಲಪಾಡಿಯ ಸಂದೇಶ್‌ಕುಮಾರ್(20) ಮತ್ತು ಬಾಲಪರಾಧಿಯೊಬ್ಬನನ್ನು ಬಂಧಿಸಲಾಗಿದೆ.

ಬಂದರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಾಂತರಾಮ್, ಸಬ್‌ಇನ್ಸ್‌ಪೆಕ್ಟರ್ ಮದನ್ ಮತ್ತು ಸಿಬ್ಬಂದಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜೂ.21ರ ರಾತ್ರಿ ಬಂದರ್ ಲೋವರ್ ಕಾರ್‌ಸ್ಟ್ರೀಟ್‌ನ ವೈನ್‌ಶಾಪ್ ಬಳಿ ನಿಂತಿದ್ದ ಆರೋಪಿಗಳು ಹಬೀಬ್ ರಹಿಮಾನ್‌ನ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ಬಾಟಲಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆಯಿಂದ ಹಬೀಬ್ ರಹಿಮಾನ್‌ನ ಕೈ ಹಾಗೂ ಕಾಲಿಗೆ ಗಾಯಗಳಾಗಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News