ಉಡುಪಿ: ರಾಜ್ಯಮಟ್ಟದ ಹಲಸು ಮೇಳ ಉದ್ಘಾಟನೆ
ಉಡುಪಿ, ಜು.1: ಎರಡು ದಿನಗಳ ರಾಜ್ಯಮಟ್ಟದ ಹಲಸಿನ ಹಬ್ಬ ಪರ್ಯಾಯ ಪೇಜಾವರ ಮಠ, ಕೃಷಿ ಮತ್ತು ತೋಟ ಗಾರಿಕೆ ವಿವಿ ಶಿವಮೊಗ್ಗ, ಸಾಮಾಜಿಕ ಉದ್ಯಮಶೀಲತಾ ಕೇಂದ್ರ ಮಣಿಪಾಲ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಗ್ಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.
ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಲಸಿನ ಮೇಳವನ್ನು ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಕೃಷಿ ತಜ್ಞ ಹಾಗೂ ಮಣಿಪಾಲ ಬಿವಿಟಿಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ.ಉಡುಪ, ಸರಕಾರ ಜನರಿಗೆ ಸಸಿ ವಿತರಿಸುವ ನೆಪದಲ್ಲಿ ಅಕೇಶಿಯಾ, ನೀಲಗಿರಿಯಂತಹ ಗಿಡಗಳನ್ನು ನೀಡದೇ ಬಹುಪಯೋಗಿ ಹಣ್ಣಿನ ಗಿಡಗಳನ್ನು ವಿತರಿಸಬೇಕು. ಹಲಸಿನ ಹಣ್ಣಿನ ವೌಲ್ಯವರ್ಧನೆ ಮಾಡಿ, ವೈವಿಧ್ಯಮಯ ಖಾದ್ಯ ಉತ್ಪನ್ನಗಳನ್ನು ಜನಪ್ರಿಯಗೊಳಿಸಬೇಕು. ಅಲ್ಲದೆ ಅವು ಗಳಿಗೆ ವ್ಯವಸ್ಥಿತವಾದ ಮಾರುಕಟ್ಟೆ ಯನ್ನು ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ ವಿವಿಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯಕ್, ಮಣಿಪಾಲ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಡಾ.ರವೀಂದ್ರನಾಥ ನಾಯಕ್, ಮಣಿಪಾಲ ಸಾಮಾಜಿಕ ಉದ್ಯಮಶೀಲತಾ ಕೇಂದ್ರದ ನಿರ್ದೇಶಕ ಡಾ.ಹರೀಶ್ ಜೋಶಿ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಯು.ಎಸ್. ಪಾಟೀಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಉಪಸ್ಥಿತರಿದ್ದರು.
ಕೃಷಿ ಸಂಶೋದನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ. ಹನುಮಂತಪ್ಪ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಡಾ.ಬಿ.ಧನಂಜಯ ವಂದಿಸಿದರು. ಉಮಾ ಮತ್ತು ಸಂಜೀವ ಕಾರ್ಯಕ್ರಮ ನಿರೂಪಿಸಿದರು.