ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಪ್ರಾಣಹಾನಿ
Update: 2016-07-07 05:33 GMT
ಮಂಗಳೂರು, ಜು.7: ನ್ಯೂಟ್ರಲ್ನಲ್ಲಿದ್ದ ಬಸ್ಸೊಂದು ಮುಂದಕ್ಕೆ ಚಲಿಸಿ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಮಂಗಳೂರಿನ ಸ್ಟೇಟ್ಬ್ಯಾಂಕ್ನ ಸಿಟಿ ಬಸ್ಸ್ಟಾಂಡ್ನಲ್ಲಿ ಸಂಭವಿಸಿದೆ.
ಖಾಸಗಿ ಬಸ್ಸೊಂದರ ಚಾಲಕ ಎಂದಿನಂತೆ ಬಸ್ನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿ ಚಹಾ ಕುಡಿಯಲು ತೆರಳಿದ್ದ ಎನ್ನಲಾಗಿದೆ. ಈ ಸಂದರ್ಭ ನ್ಯೂಟ್ರಲ್ ಗೇರ್ನಲ್ಲಿದ್ದ ಬಸ್ ರಸ್ತೆ ಇಳಿಜಾರಾಗಿರುವ ಹಿನ್ನೆಲೆಯಲ್ಲಿ ಬಸ್ ನಿಧಾನಕ್ಕೆ ಮುಂದಕ್ಕೆ ಚಲಿಸಲಾರಂಭಿಸಿ, ನೇರವಾಗಿ ಎದುರಿಗಿದ್ದ ಅಂಗಡಿಯೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ.
ಬಸ್ ಚಾಲಕನಿಲ್ಲದೆ ಚಲಿಸುತ್ತಿರುವುದನ್ನು ಕಂಡ ಬಸ್ನಿಲ್ದಾಣದಲ್ಲಿದ್ದ ಮಹಿಳೆಯೋರ್ವರು ಬೊಬ್ಬೆ ಹಾಕಿ ಬಸ್ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರನ್ನು ಎಚ್ಚರಿಸಿದರು. ಇದರಿಂದ ಎಚ್ಚೆತ್ತ ಸಾರ್ವಜನಿಕರು ಚದುರಿದ ಪರಿಣಾಮ ಸಂಭವನೀಯ ಪ್ರಾಣಾಪಾಯ ತಪ್ಪಿದೆ ಎನ್ನಲಾಗಿದೆ. ಘಟನೆಯಿಂದ ಅಂಗಡಿ ಮತ್ತು ಬಸ್ಗೆ ಹಾನಿ ಉಂಟಾಗಿದೆ.