ಚಲಿಸುತ್ತಿದ್ದ ಬಸ್‌ನಿಂದ ತಲೆ ಹೊರ ಹಾಕಿದ ಬಾಲಕಿ ಮೃತ್ಯು

Update: 2016-07-08 15:57 GMT

ಮಂಗಳೂರು, ಜು.8: ಚಲಿಸುತ್ತಿದ್ದ ಶಾಲಾ ಬಸ್‌ನ ಕಿಟಕಿ ಮೂಲಕ ತಲೆಯನ್ನು ಹೊರ ಹಾಕಿದ 9 ವರ್ಷದ ಬಾಲಕಿಯೋರ್ವಳು ರಸ್ತೆ ಬದಿಯ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಯೆಯ್ಯಾಡಿ ಬಳಿ ಇಂದು ನಡೆದಿದೆ.

ಮೃತ ಬಾಲಕಿಯನ್ನು ಕಾವೂರು ಜ್ಯೋತಿನಗರದ ನಿವಾಸಿ ಸುಧಾ ಎಂಬವರ ಪುತ್ರಿ ಭವಾನಿ (9) ಎಂದು ಗುರುತಿಸಲಾಗಿದೆ.

ವಿ.ಟಿ. ರಸ್ತೆಯ ಶ್ರೀನಿವಾಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಭವಾನಿ ಇಂದು ಸಂಜೆ ಶಾಲಾ ಬಸ್ಸಿನಲ್ಲೇ ಶಾಲೆಯಿಂದ ಮನೆಗೆ ಮರಳುತ್ತಿದ್ದಳು.

ಯೆಯ್ಯಾಡಿಯ ಸರ್ಬತ್‌ಕಟ್ಟೆ ಬಳಿ ಬಸ್ಸು ತಲುಪುತ್ತಿದ್ದಂತೆ ಭವಾನಿ ಬಸ್‌ನ ಕಿಟಕಿಯ ಮೂಲಕ ತಲೆಯನ್ನು ಹೊರಹಾಕಿದ್ದು, ಇದು ಬಸ್ ಚಾಲಕನ ಗಮನಕ್ಕೆ ಬಾರದಿದ್ದುದರಿಂದ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಆಕೆಯ ತಲೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಭವಾನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಈ ಬಗ್ಗೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News