ಪುತ್ತೂರು: ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ

Update: 2016-07-10 17:16 GMT

ಪುತ್ತೂರು, ಜು.10: ವಿವಾಹಿತೆಯೊಬ್ಬರು ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಂಡೂರು ಗ್ರಾಮದ ಕುರೆಮಜಲು ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮುಂಡೂರು ಗ್ರಾಮದ ಕುರೆಮಜಲು ನಿವಾಸಿ ಸತೀಶ್ ಪೂಜಾರಿಯ ಪತ್ನಿ ವೇದಾವತಿ (26) ಮತ್ತು ಮಗು ಮನೀಶ್ (2) ಆತ್ಮಹತ್ಯೆ ಮಾಡಿಕೊಂಡವರು.
 
ಸತೀಶ್ ಮತ್ತು ವೇದಾವತಿಯ ವಿವಾಹವು ಮೂರು ವರ್ಷದ ಹಿಂದೆ ನಡೆದಿತ್ತು. ಶನಿವಾರ ರಾತ್ರಿ ಕುಟುಂಬದೊಂದಿಗೆ ಕುಳಿತುಕೊಂಡು ಟಿವಿ ನೋಡುತ್ತಿದ್ದ ವೇದಾವತಿ ಬಳಿಕ ಪತಿ ಹಾಗೂ ಮಗುವಿನೊಂದಿಗೆ ಶೌಚಾಲಯಕ್ಕೆ ಹೋಗಿದ್ದರು. ಪತಿ ಸತೀಶ್ ಶೌಚ ಮಾಡಿ ಬಂದು ಮನೆಯ ಕೋಣೆಯಲ್ಲಿ ಮಲಗಿದ್ದರೆ, ವೇದಾವತಿ ಹಾಗೂ ಮಗು ಹಿಂತಿರುಗಿ ಬಂದಿರಲಿಲ್ಲ ಎನ್ನಲಾಗಿದೆ. ತುಂಬಾ ಹೊತ್ತಾದರೂ ತಾಯಿ ಮತ್ತು ಮಗು ಮನೆಯೊಳಗೆ ಬಾರದ ಹಿನ್ನೆಲೆಯಲ್ಲಿ ಮನೆಮಂದಿ ಹುಡುಕಾಟ ಆರಂಭಿಸಿದ್ದರು. ಈ ಸಂದರ್ಭ ಮನೆಯ ಸಮೀಪದ ತೋಡಿನ ಬದಿಯಲ್ಲಿ ವೇದಾವತಿಯ ಮೊಬೈಲ್ ಸಿಕ್ಕಿತ್ತು. ಇದನ್ನು ಕಂಡು ಸಂಶಯಗೊಂಡು ಪಕ್ಕದಲ್ಲಿದ್ದ ಕೆರೆಯಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ. ಬಳಿಕ ಅಗ್ನಿ ಶಾಮಕ ದಳದ ಸಹಾಯದಿಂದ ಮೃತದೇಹಗಳನ್ನು ಮೇಲೆತ್ತಲಾಗಿತ್ತು. ಕೃತ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News