ಜನೋಪಯೋಗಿ ಕಾರ್ಯಕ್ರಮ ನಡೆಯಲಿ: ಫಾ.ಜೆ.ಬಿ.ಸಲ್ಡಾನ

Update: 2016-07-10 14:45 GMT
ಪಜೀರು ಚರ್ಚ್ ಸಭಾಂಗಣದಲ್ಲಿ ಕೆಥೋಲಿಕ್ ಸಭಾದಿಂದ ನಡೆದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.

ಮಂಗಳೂರು, ಜು. 10: ಸಂಘ-ಸಂಸ್ಥೆಗಳಿಂದ ಜನೋಪಯೋಗಿ ಕಾರ್ಯಕ್ರಮಗಳು ನಡೆಯಬೇಕಾಗಿರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಥೋಲಿಕ್ ಸಭಾ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಸಮಾಜಮುಖಿಯಾಗಿರುವುದು ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ವಲಯ ಹಾಗೂ ಕೆಥೋಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ಫಾ.ಜೆ.ಬಿ.ಸಲ್ಡಾನ ಅಭಿಪ್ರಾಯಪಟ್ಟಿದ್ದಾರೆ.

ಪಜೀರು ಮರ್ಸಿಯಮ್ಮನವರ ಇಗರ್ಜಿ ಹಾಗೂ ಕೆಥೋಲಿಕ್ ಸಭಾ ಫಜೀರು ಘಟಕ ಇದರ ಜಂಟಿ ಆಶ್ರಯದಲ್ಲಿ ರವಿವಾರ ಗ್ರಾಮಚಾವಡಿಯಲ್ಲಿರುವ ಪಜೀರ್ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳಿಗೆ ಅಭಿನಂದನೆ ಹಾಗೂ ಅಲ್ಪಸಂಖ್ಯಾತರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ವ ಸಮುದಾಯದ ಜನರ ಜೊತೆ ಜನಪ್ರತಿನಿಧಿಗಳು ಒಂದೆಡೆ ಬೆರೆತು ಅಂತರಾಳದ ಮಾತುಗಳ ಮೂಲಕ ಪರಸ್ಪರ ಬೆರೆತಾದ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಕೆಥೋಲಿಕ್ ಸಭಾವು ಜನರೇ ಆರಿಸಿ ಕಳುಹಿಸಿದ ಪ್ರತಿನಿಧಿಗಳನ್ನು ಅಭಿನಂದಿಸುವ ಮೂಲಕ ಜವಾಬ್ದಾರಿ ತಿಳಿಹೇಳುವ ಕೆಲಸ ಮಾಡಿದೆ ಎಂದರು.

ಕಾರ್ಯಕ್ರದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ರಶೀದಾ ಬಾನು, ಮಮತಾ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ನವೀನ್ ಪಾದಲ್ಪಾಡಿ, ಶಶಿಪ್ರಭಾ ಶೆಟ್ಟಿ, ಪ್ರದ್ಮಾವತಿ ಪೂಜಾರಿ, ಅಬ್ದುಲ್ ಜಬ್ಬಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಫಿರೋಝ್, ಅನಿತಾ ಡಿಸೋಜ, ಸೀತಾರಾಮ ಶೆಟ್ಟಿ, ಶೌಕತ್ ಅಲಿ, ನಿವೃತ್ತ ಅಂಚಿನಲ್ಲಿರುವ ಶಿಕ್ಷಕಿ ಬೆನೆಡಿಕ್ಟ್ ಮೊಂತೆರೋ ಮೊದಲಾದವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಸದಸ್ಯರು, ತಾಲೂಕು ಪಂಚಾಯತ್ ಅಧ್ಯಕ್ಷ, ಸದಸ್ಯರು ಕ್ರೈಸ್ತ ಸಮುದಾಯ ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ, ಸರ್ವ ಪಕ್ಷದವರನ್ನೂ ಒಂದೇ ವೇದಿಕೆಯಡಿ ಸೇರಿಸಿ ಸನ್ಮಾನಿಸುವ ಮೂಲಕ ತಮ್ಮ ಮೇಲಿರುವ ಜವಾಬ್ದಾರಿ ನೆನಪಿಸಿದ್ದಾರೆ. ತಮ್ಮಲ್ಲಿಟ್ಟ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುವ ಭರವಸೆ ನೀಡಿದರು.

ಕೆಥೋಲಿಕ್ ಸಭಾ ಪಜೀರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಫಾ.ವಲೇರಿಯನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆಥೋಲಿಕ್ ಸಭಾ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷೆ ಫ್ಲೇವಿ ಡಿಸೋಜಾ ರಾಣಿಪುರ, ನಿಯೋಜಿತ ಅಧ್ಯಕ್ಷ ವಲೇರಿಯನ್ ಡಿಸೋಜ, ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಪಜೀರು ಘಟಕಾಧ್ಯಕ್ಷ ಹಿಲರಿ ಡಿಸೋಜ, ಕಾರ್ಯದರ್ಶಿ ಲವೀನ ದಾಂತಿ, ಪಜೀರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಕ್ಟರ್ ಮೊಂತೆರೊ ಹಾಗೂ ಕಾರ್ಯದರ್ಶಿ ಫೆಲಿಕ್ಸ್ ಮೊಂತೆರೊ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಜಿಲ್ಲಾ ಡಿ.ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಪಾನೀರ್ ಹಾಗೂ ಮಂಗಳೂರು ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಅಬ್ದುಲ್ ಖಾದರ್ ಮಾಹಿತಿ ನೀಡಿದರು.

ಕೆಥೋಲಿಕ್ ಸಭಾ ರಾಜಕೀಯ ಸಂಚಾಲಕ ಪ್ರೀತಮ್ ನೊರೊನ್ಹಾ ಸನ್ಮಾನಿತರ ಪರಿಚಯ ಓದಿದರು. ಪಜೀರು ಘಟಕ ಕ್ಯಾತೋಲಿಕ್ ಸಭಾ ಅಧ್ಯಕ್ಷ ಹಿಲರಿ ಡಿಸೋಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲವಿನಾ ದಾಂತಿ ವಂದಿಸಿದರು. ಶಿಕ್ಷಕ ಜಾನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News