ಉಪ್ಪಿನಂಗಡಿ: ಗ್ಯಾಸ್ ಟ್ಯಾಂಕರ್-ಲಾರಿ ಮಧ್ಯೆ ಢಿಕ್ಕಿ; ಮೂವರು ಗಂಭೀರ

Update: 2016-07-16 13:44 GMT

ಉಪ್ಪಿನಂಗಡಿ, ಜು.16:ಅನಿಲ ಟ್ಯಾಂಕರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಜೆ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಅನಿಲ ಟ್ಯಾಂಕರ್ ಚಾಲಕ ತಮಿಳುನಾಡಿನ ಸೇಲಂನ ನಿವಾಸಿ ವಿಳಯರಾಜ (42) ಹಾಗೂ ನಿರ್ವಾಹಕ ಸುರೇಶ್ (38) ಹಾಗೂ ಲಾರಿ ಚಾಲಕ ದೊಡ್ಡಬಳ್ಳಾಪುರ ನಿವಾಸಿ ಶಕೀಲ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದ ಅನಿಲ ಟ್ಯಾಂಕರ್‌ಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಕಲ್ಲಿದ್ದಲು ಹೇರಿಕೊಂಡು ಹೋಗುತ್ತಿದ್ದ ಲಾರಿ ಬೆದ್ರೋಡಿ ಬಳಿ ಇಂದು ಸಂಜೆ ಮುಖಾಮುಖಿ ಢಿಕ್ಕಿಯಾಯಿತು.

ಕಲ್ಲಿದ್ದಲು ಸಾಗಾಟ ಲಾರಿ ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಲಾರಿಯನ್ನು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದ್ದು, ಅಪಘಾತದ ರಭಸಕ್ಕೆ ಅನಿಲ ಟ್ಯಾಂಕರ್ ಚರಂಡಿಗಿಳಿದಿದ್ದು, ಲಾರಿಯ ಹಿಂಬದಿಯ ಸಿಲಿಂಡರ್ ಮಗುಚಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News