ಪಡುಬಿದ್ರೆ: ರೋಟರಿ ಕ್ಲಬ್ನ ಪದಗ್ರಹಣ ಸಮಾರಂಭ
ಪಡುಬಿದ್ರೆ, ಜು.18: ಅಂತಾರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಮೂಲಕ ಸಂಘಟಿತರಾಗಿ ಮನುಕುಲದ ಸೇವೆಯನ್ನು ನಾವು ಗೈಯೋಣವೆಂಬುದಾಗಿ ರೋಟರಿ ಜಿಲ್ಲೆ 3180ರ ಮಾಜಿ ಜಿಲ್ಲಾ ರಾಜ್ಯಪಾಲ ಡಾ. ದೇವದಾಸ್ ರೈ ಹೇಳಿದ್ದಾರೆ.
ಪಡುಬಿದ್ರೆ ರೋಟರಿ ಕ್ಲಬ್ನ 2016 -17ನೆ ಸಾಲಿನ ನೂತನ ಅಧ್ಯಕ್ಷ ಪತ್ರಕರ್ತ ಅಬ್ದುಲ್ ಹಮೀದ್ ಮತ್ತವರ ತಂಡದ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿದ್ದ ರೋಟರಿ ಜಿಲ್ಲೆ 3182ನ ಸಹಾಯಕ ರಾಜ್ಯಪಾಲ ಡಾ.ಗುರುರಾಜ್ ಕೆ.ಪಡುಬದ್ರಿ ರೋಟರಿ ಸಂಸ್ಥೆಯ ಗೃಹಪತ್ರಿಕೆ ‘ಸ್ಪಂದನ’ವನ್ನು ಬಿಡುಗಡೆಗೊಳಿಸಿ ಮಾತಾಡುತ್ತಾ, ಮನುಕುಲದ ಸೇವೆಯ ತುಡಿತ ಸದಾ ನಮ್ಮೆಲ್ಲರಲ್ಲಿರಲಿ. ಅಂತಾರಾಷ್ಟ್ರೀಯ ಅಧ್ಯಕ್ಷರ ಮತ್ತು ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮಗಳನ್ನು ಅಧಿಕೃತ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಾ ರೋಟರಿ ಸದಸ್ಯತನವನ್ನು ವೃದ್ಧಿಗೊಳಿಸೋಣವೆಂದರು.
ವಲಯ ಸೇನಾನಿ ಶ್ರೀನಿವಾಸ ರಾವ್ ಮಾತಾಡಿದರು. ನೂತನ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರೆ ರೋಟರಿ ಸಂಸ್ಥೆಯ ಸದಸ್ಯರು ತನ್ನ ಈ ಬಾರಿಯ ಸೇವಾ ಕಾರ್ಯಗಳಿಗಾಗಿ ಬೆಂಬಲಿಸಬೇಕೆಂದರು.
ಈ ಸಮಾರಂಭದಲ್ಲಿ ಪಡುಬಿದ್ರೆ ರೋಟರಿ ಸಂಸ್ಥೆಯ ಮೂಲಕ ದಿ. ವೈ. ಹಿರಿಯಣ್ಣ ಮತ್ತು ದಿ.ಮೀರಾ ಹಿರಿಯಣ್ಣ ಸವಿನೆನೆಪಿಗಾಗಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಫಲಿತಾಂಶವನ್ನು ಸತತ 3ನೇ ಬಾರಿಯೂ ದಾಖಲಿಸಿದ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಗೆ ರೋಲಿಂಗ್ ಶೀಲ್ಡನ್ನು ಶಾಶ್ವತವಾಗಿ ನೀಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.
ಪಡುಬಿದ್ರಿ ರೋಟರಿ ಸಂಸ್ಥೆಗೆ ಪ್ರಕಾಶ್ ರಾವ್ ಪಿ. ಎನ್., ರಮೀಝ್ ಹುಸೈನ್, ರಿಯಾಝ್ ನಝೀರ್ ಸಾಹೇಬ್, ಸಂತೋಷ್ ನಂಬಿಯಾರ್, ರಾಜೇಶ್ ಶೆಟ್ಟಿಗಾರ್, ಮುಹಮ್ಮದ್ ಇಸ್ಮಾಯೀಲ್ ಪಲಿಮಾರು, ಸಂದೀಪ್ ಆರ್. ಪಲಿಮಾರು ಇವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧಕರೆನಿಸಿದ ಪತ್ರಕರ್ತ ಸುರೇಶ್ ಎರ್ಮಾಳ್, ಶೌಕತ್ ಅಲಿ, ಸಂದೀಪ್ ಆರ್. ಪಲಿಮಾರು ಇವರನ್ನು ಸಮ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಹೇಮಚಂದ್ರ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಕರುಣಾಕರ ನಾಯಕ್ ವಂದಿಸಿದರು.