ದಲಿತರ ಮೇಲಿನ ದೌರ್ಜನ್ಯಕ್ಕೆ ಸಿಪಿಐ(ಎಂ) ಖಂಡನೆ
ಬೆಳ್ತಂಗಡಿ, ಜು.21: ಗುಜರಾತಿನಲ್ಲಿ ಸತ್ತ ದನದ ಚರ್ಮ ತೆಗೆಯುತ್ತಿದ್ದರು ಎಂಬ ನೆಪ ಒಡ್ಡಿ ಕೋಮುವಾದಿಗಳು ದಲಿತರ ಮೇಲೆ ನಡೆಸಿದ, ನಡೆಸುತ್ತಿರುವ ದೌರ್ಜನ್ಯಗಳನ್ನು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಖಂಡಿಸುತ್ತದೆ ಎಂದು ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಓರ್ವ ಮಹಿಳಾ ನಾಯಕಿ ಹಾಗೂ ದಲಿತ ನಾಯಕಿಯಾದ ಮಾಯಾವತಿಯ ಬಗ್ಗೆ ಬಿಜೆಪಿ ಮುಖಂಡರೊಬ್ಬರ ಹೇಳಿಕೆಯಿಂದ ಇವರು ಮಾತೆ ಮಾತೆ ಎನ್ನುತ್ತಾ ಮಹಿಳೆಯನ್ನು ಯಾವ ರೀತಿ ಕೆಟ್ಟದಾಗಿ ಕಾಣುತ್ತಿದ್ದಾರೆ ಎಂಬುದು ಅರಿವಾಗುತ್ತದೆ. ಇದು ಕೋಮುವಾದಿಗಳ ಸಂಸ್ಕೃತಿಯೂ ಆಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇಂತಹ ನೀಚ ಕೃತ್ಯಗಳನ್ನು ಮಾಡುವವರ್ಯಾರೇ ಆಗಿರಲಿ ಅವರ ವಿರುದ್ದ ಸಿಪಿಐ(ಎಂ) ಸಮರ ಸಾರುತ್ತದೆ. ದಲಿತರ ಮೇಲಿನ ದೌರ್ಜನ್ಯವನ್ನು ದಲಿತರು ಮಾತ್ರವಲ್ಲ ಭಾರತೀಯರಾದ ನಾವೆಲ್ಲರೂ ಹಾಗೂ ದಲಿತ ನಾಯಕಿ ಮಹಿಳೆಯ ಮಾನ ತೆಗೆದದ್ದರ ವಿರುದ್ದ ದಲಿತರು ಮಾತ್ರವಲ್ಲ ಇಡೀ ಮಹಿಳಾ ಸಮಾಜ ಮಾತ್ರವಲ್ಲ ಮನುಷ್ಯತ್ವ ಇರುವ ಎಲ್ಲರೂ ಸಿಡಿದೇಳಬೇಕಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಡುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.