ಕೆಎಸ್ಸಾರ್ಟಿಸಿ ನೌಕರರ ಮುಷ್ಕರ - ಕೆಟ್ಟು ನಿಂತ ಬಸ್ಸಿಗೂ ತಟ್ಟಿದ ಬಿಸಿ
Update: 2016-07-27 14:31 GMT
ಕಡಬ,ಜು.27: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಕಡಬ ಮೂಲದ ಕೆಎಸ್ಸಾರ್ಟಿಸಿ ಚಾಲಕ ಹಾಗೂ ನಿರ್ವಾಹಕರೋರ್ವರು ರಸ್ತೆ ಮಧ್ಯೆ ಬಾಕಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 24 ಆದಿತ್ಯವಾರ ಬೆಂಗಳೂರಿನಿಂದ ಸುಬ್ರಹ್ಮಣ್ಯ, ಸುಳ್ಯ ಮಾರ್ಗದಿಂದಾಗಿ ಪುತ್ತೂರು ಹೊರಟಿದ್ದ ಪುತ್ತೂರು ಡಿಪೋದ KA.19.F.2932 ರಾಜಹಂಸ ಬಸ್ಸು ಕುಣಿಗಲ್ ಸಮೀಪದ ತಾಳೆಕೆರೆ ಎಂಬಲ್ಲಿ ಬ್ರೇಕ್ ಎಕ್ಸೆಲ್ ತುಂಡಾಗಿ ರಸ್ತೆ ಮಧ್ಯೆ ಬಾಕಿಯಾಗಿತ್ತು. ತಕ್ಷಣವೇ ಬಸ್ಸು ಚಾಲಕ ಪುತ್ತೂರು ತಾಲೂಕಿನ ಕಡಬದ ಹಳೇಸ್ಟೇಷನ್ ನಿವಾಸಿ ಪ್ರಸ್ತುತ ಪಾಣಾಜೆಯಲ್ಲಿ ವಾಸವಾಗಿರುವ ಮುನೀಶ್ವರರವರು ಪುತ್ತೂರು ಡಿಪೋ ಗೆ ಮಾಹಿತಿ ನೀಡಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ನೌಕರರ್ಯಾರೂ ಇಲ್ಲವೆನ್ನುವ ಸಬೂಬು ಹೇಳಿಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ. ಆದರೆ ಹಾದಿ ಮಧ್ಯೆ ಬಸ್ಸನ್ನು ನಿಲ್ಲಿಸಿ ಮೂರು ದಿನಗಳನ್ನು ಕಳೆದಿದ್ದು, ಇವರ ಬವಣೆಯನ್ನು ಯಾರೂ ಕೇಳುವವರಿಲ್ಲದಂತಾಗಿದೆ.