ಪಿಲಿಕುಳದಲ್ಲಿ ‘ಮಿನಿ ಐಫೆಲ್ ಟವರ್’ ಅನಾವರಣ

Update: 2016-07-27 18:38 GMT

ಮಂಗಳೂರು, ಜು.27: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯಾಗಿ ಲೇಕ್ ಗಾರ್ಡನ್‌ನಲ್ಲಿ ನಿರ್ಮಿಸಲಾಗಿರುವ ಮಿನಿ ಐಫೆಲ್ ಟವರ್‌ನ ನಾಮಫಲಕವನ್ನು ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅನಾವರಣಗೊಳಿಸಿದರು.

ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ಪ್ರಪಂಚ ಹಾಗೂ ದೇಶದ ಸುಮಾರು 10 ಅದ್ಭುತಗಳ ಮಾದರಿಗಳನ್ನು ರಚಿಸುವ ನಿಟ್ಟಿನಲ್ಲಿ ಮಿನಿ ಐಫೆಲ್ ಟವರನ್ನು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ಯಾರಿಸ್‌ನಲ್ಲಿರುವ ಐೆಲ್ ಟವರ್‌ನ ಮಾದರಿಯನ್ನು ಹೋಲುವ ಸುಮಾರು 50 ಅಡಿ ಎತ್ತರದ ಕಬ್ಬಿಣದ ಮಾದರಿ ಇದಾಗಿದೆ. ಚೆನ್ನೈ ಮೂಲದ ಪರಿಣಿತರ ತಂಡ ಇದನ್ನು ನಿರ್ಮಿಸಿದ್ದು, ಪ್ರವಾಸಿಗರು ಇದರ ಎದುರು ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶವೂ ಇದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಈ ಸಂದರ್ಭ ತಿಳಿಸಿದರು.

ಕಳೆದೆರಡು ವರ್ಷಗಳಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ನೇತೃತ್ವದಲ್ಲಿ ಮೃಗಾಲಯಕ್ಕೆ ಪ್ರಾಣಿಗಳನ್ನು ದತ್ತು ಪಡೆಯುವ ಕಾರ್ಯ ನಡೆದಿದೆ. ಮಾತ್ರವಲ್ಲದೆ ಜಿರಾಫೆ, ಝೀಬ್ರಾ ಹಾಗೂ ಚಿಂಪಾಂಜಿಗಳನ್ನು ಮಧ್ಯ ಆಫ್ರಿಕಾದಿಂದ ಖರೀದಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಈ ಮೂಲಕ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಮೃಗಾಲಯದಿಂದ 1.5 ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿದ್ದು, ಇದರಲ್ಲಿ ಸುಮಾರು 1 ಕೋಟಿ ರೂ.ಗಳಿಗೂ ಅಧಿಕ ಹಣ ಪ್ರಾಣಿ, ಪಕ್ಷಿಗಳು ಹಾಗೂ ಮೃಗಾಲಯವನ್ನು ನಿರ್ವಹಿಸುವ ಸಿಬ್ಬಂದಿಗಾಗಿ ವ್ಯಯವಾಗುತ್ತಿದೆ. ಇನ್ನಷ್ಟು ಪ್ರಾಣಿಗಳನ್ನು ತರಿಸುವ ವ್ಯವಸ್ಥೆ ಹಾಗೂ ನಿರ್ವಹಣೆಗೆ ಇನ್ನಷ್ಟು ಹಣಕಾಸಿನ ಅಗತ್ಯವಿದ್ದು, ಈ ಬಗ್ಗೆ ಸರಕಾರವನ್ನು ಕೋರಲಾಗಿದೆ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಎಚ್‌ಪಿಸಿಎಲ್‌ನ ಮುಖ್ಯ ವ್ಯವಸ್ಥಾಪಕ ರಾಕೇಶ್ ಅಗರ್‌ವಾಲ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

28 ಲಕ್ಷ ರೂ.ಗಳ ಜೈವಿಕ ಮಾಹಿತಿ ಕೇಂದ್ರ ಉದ್ಘಾಟನೆ

ಪಿಲಿಕುಳದ ಮೃಗಾಲಯದ ಒಳಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರಾಯೋಜಿತ 28 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿರುವ ಜೈವಿಕ ಮಾಹಿತಿ ಕೇಂದ್ರವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು.

ಪಿಲಿಕುಳಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅನುಕೂಲವಾಗುವಂತೆ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸಲು ಈ ಕೇಂದ್ರ ಬಳಕೆಯಾಗಲಿದೆ. ದೇಶದಲ್ಲಿ ಪ್ರಮುಖವಾಗಿ ಗುರುತಿಸಲಾಗಿರುವ 14 ಬೃಹತ್ ಮೃಗಾಲಯಗಳಲ್ಲಿ ಪಿಲಿಕುಳ ನಿಸರ್ಗಧಾಮದ ಮೃಗಾಲಯ ಕೂಡಾ ಸೇರಿದೆ ಎಂದು ಜಯಪ್ರಕಾಶ್ ಭಂಡಾರಿ ಹೇಳಿದರು

ಮುಂದಿನ ಹಂತದಲ್ಲಿ ತಾಜ್‌ಮಹಲ್, ಕುತುಬ್ ಮಿನಾರ್

ಪಿಲಿಕುಳದಲ್ಲಿ ಮುಂದಿನ ಹಂತದಲ್ಲಿ ದೇಶದ ಅತ್ಯದ್ಭುತ ರಚನೆಗಳಲ್ಲಿ ಒಂದಾಗಿರುವ ಆಗ್ರಾದಲ್ಲಿರುವ ತಾಜ್‌ಮಹಲ್‌ನ ಮಾದರಿ ನಿರ್ಮಾಣವಾಗಲಿದೆ. ಇದರೊಂದಿಗೆ ಕುತುಬ್ ಮಿನಾರ್, ಎಲ್ಲೋರಾ, ಹಂಪಿಯ ಆಕರ್ಷಕ ರಥ, ಮಥುರೆ ದೇವಸ್ಥಾನದ ಮಾದರಿಗಳು ಶೀಘ್ರದಲ್ಲೇ ತಲೆ ಎತ್ತಲಿವೆ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News