ಎಂಡೋಸಲ್ಫಾನ್ ಪುನರ್ವಸತಿ ಸೆಲ್ ನಿಷ್ಕ್ರಿಯ: ಸಂತ್ರಸ್ತರಲ್ಲಿ ಆತಂಕ
ಕಾಸರಗೋಡು, ಜು.31: ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಹಾಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ರಚನೆಯಾಗಿರುವ ಎಂಡೋಸಲ್ಫಾನ್ ಪುನರ್ವಸತಿ ಸೆಲ್ ನಿಷ್ಕ್ರಿಯಗೊಂಡಿದೆ.
ಪ್ರತಿ ತಿಂಗಳು ಸಭೆ ನಡೆಯಬೇಕಿದ್ದರೂ ಇದೀಗ ಆರು ತಿಂಗಳು ಕಳೆದರೂ ಈ ಸೆಲ್ನ ಸಭೆ ಕರೆದಿಲ್ಲ. ಇದರಿಂದ ಎಂಡೋ ಸಂತ್ರಸ್ತರಿಗೆ ಸಮಯಕ್ಕನು ಗುಣವಾಗಿ ಲಭಿಸಬೇಕಾದ ಸವಲತ್ತುಗಳು ಕೈತಪ್ಪಿ ಹೋಗುವ ಭೀತಿ ಎದುರಾಗಿದೆ.
ಜನವರಿ 30ರಂದು ಕೊನೆಯದಾಗಿ ಸಭೆ ನಡೆದಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಸಭೆಯು ಪ್ರತಿಪಕ್ಷ ಶಾಸಕರು ಮತ್ತು ಜನಪ್ರತಿನಿಧಿಗಳು ಬಹಿಷ್ಕಾರ ದಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಬಳಿಕ ಇದೀಗ ಹೊಸ ಸರಕಾರ ಬಂದರೂ ಇದುವರೆಗೆ ಎಂಡೋ ಸೆಲ್ ಸಭೆ ನಡೆದಿಲ್ಲ. ಇದರಿಂದ ಸಂತ್ರಸ್ತರ ಸಾಲ ಮರುಪಾವತಿ, ವೈದ್ಯಕೀಯ ಶಿಬಿರ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶಿಫಾರಸು ಮಾಡಿದ ಸಹಾಯಧನ ವಿತರಣೆ ಮೊದಲಾದ ಎಂಡೋ ಸಂತ್ರಸ್ತರಿಗೆ ಸಿಗಬೇಕಿದ್ದ ಸೌಲಭ್ಯಗಳು ಸಿಗದಂತಾಗಿವೆ.
2006ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಎಂಡೋಸಲ್ಫಾನ್ಸೆಲ್ನ ಜಿಲ್ಲಾ ಸಮಿತಿಯಲ್ಲಿ 62 ಸದಸ್ಯರಿದ್ದಾರೆ. ಪ್ರಸ್ತುತ ರಾಜ್ಯ ಕೃಷಿ ಸಚಿವರು ಅಧ್ಯಕ್ಷರಾಗಿರುವ ಈ ಸಮಿತಿಯ ಸಭೆ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ನಡೆಯುತ್ತಿತ್ತು. ಅದು ಕೂಡಾ ಗೊಂದಲದೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಪ್ರಸ್ತುತ ಜನವರಿಯ ಬಳಿಕ ಈ ಸೆಲ್ನ ಸಭೆಯೇ ನಡೆದಿಲ್ಲ. ಇದರಿಂದಾಗಿ ಎಂಡೋ ಸಂತ್ರಸ್ತರು ನಿರಾಶರಾಗಿದ್ದಾರೆ.