ಮನೆ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ಒದಗಿಸಲು ಒತ್ತಾಯಿಸಿ ಮಂಗಳೂರು ನಗರ ಮಟ್ಟದ ಸಮಾವೇಶ
ಮಂಗಳೂರು, ಅ.1:ಮನೆಕೆಲಸ ಮಾಡುವ ಕಾರ್ಮಿಕರಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಇತ್ತೀಚೆಗೆ ನಗರದ ಎನ್ಜಿಓ ಹಾಲ್ನಲ್ಲಿ ಮಂಗಳೂರು ನಗರ ಮಟ್ಟದ ಸಮಾವೇಶವು ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್ ಬಜಾಲ್ ಅವರು ಸಮಾಜದ ಅವಿಭಾಜ್ಯ ಅಂಗವಾಗಿರುವ ಮನೆಕೆಲಸಗಾರರು ಅಸಂಘಟಿತ ಕ್ಷೇತ್ರದ ಕಾರ್ಮಿಕರಾಗಿದ್ದು ಸಾಮಾಜಿಕ ಭದ್ರತೆ ಇಲ್ಲದೆ ಸೂಕ್ತ ರಕ್ಷಣೆಯೂ ಇಲ್ಲದೆ ದುಡಿಯುವ ಶ್ರಮಜೀವಿಗಳಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದಾರೆ. ಮಾತ್ರವಲ್ಲದೆ ಇನ್ನೊಬ್ಬರ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗಮಾಡುವ ತ್ಯಾಗ ಜೀವಿಗಳಾಗಿದ್ದಾರೆ. ಇಂದಿನ ಸಮಾಜದಲ್ಲಿ ತೀರಾ ನಿಕೃಷ್ಟವಾಗಿ ಕಾಣುವ ಮನೆಕೆಲಸಗಾರರಿಗೆ ರಾಜ್ಯ ಸರಕಾರವು ವಿಶೇಷ ನಿಯಮಾವಳಿಗಳನ್ನು ನೀಡುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕಾಗಿದೆ. ತೀರಾ ಬಡವರಾಗಿರುವ ಮನೆಕೆಲಸಗಾರರಿಗೆ ಗುರುತುಚೀಟಿ, ಮಕ್ಕಳ ವಿದ್ಯಾರ್ಥಿ ವೇತನ, ಆರೋಗ್ಯ ಸೌಲಭ್ಯ, ಭವಿಷ್ಯನಿಧಿ ಯೋಜನೆ, ಬಿಪಿಎಲ್ ರೇಶನ್ ಕಾರ್ಡ್, ಉಚಿತ ಮನೆ ನಿವೇಶನ ನೀಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮಂಗಳೂರು ನಗರ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ ವಹಿಸಿದ್ದರು.