ಕಾಪು ತಾಲೂಕು ರಚನೆ ಹೋರಾಟಕ್ಕಾಗಿ ಪಾದಯಾತ್ರೆ: ಶಾಸಕ ಸೊರಕೆ

Update: 2016-08-02 13:56 GMT

ಪಡುಬಿದ್ರೆ, ಆ.2: ಕಾಪುವನ್ನು ಹೊಸ ತಾಲೂಕು ರಚನೆ ಮಾಡಬೇಕು ಎಂದು ಆಗ್ರಹಿಸಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಉಡುಪಿ ತಾಲೂಕಿನ ಗಡಿಪ್ರದೇಶವಾದ ಹೆಜಮಾಡಿಯಿಂದ ಆರಂಭಿಸಿ ಕಾಪು ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಲಾಗುವುದು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಪಡುಬಿದ್ರೆಯಲ್ಲಿ ಮಂಗಳವಾರ ನಡೆದ ಪಡುಬಿದ್ರೆ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯತ್‌ಗಳ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದಕ್ಕಾಗಿ ತಾಲೂಕು ರಚನೆಯಾದಲ್ಲಿ ಎಲ್ಲಾ ಸವಲತ್ತು ಪಡೆಯಲು ಅನುಕೂಲವಾಗಲಿದೆ. ತಾಲೂಕು ರಚನೆಗಾಗಿ ಸರ್ವಪಕ್ಷಗಳ ಸಭೆ ನಡೆಸಲಾಗುವುದು. ಜನರು ಪಕ್ಷಾತೀತವಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ವಿನಯಕುಮಾರ್ ಸೊರಕೆ ಮನವಿ ಮಾಡಿದರು.

ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಭಾಗವಹಿಸದ ಕಾರಣ ಜನರ ಸಮಸ್ಯೆಗಳಿಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವುದರಿಂದ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪಾರದರ್ಶಕವಾಗಿ ಸ್ಪಂದಿಸಲು ಸಾಧ್ಯವಿದೆ. ಮೂರು ವರ್ಷಗಳಲ್ಲಿ ನಿರಂತರ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗಿದೆ. ಸಾಕಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಹೆಜಮಾಡಿ ನದಿಯಿಂದ 55 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶೀಘ್ರ ವಿಸ್ಕೃತ ಯೋಜನಾ ವರದಿ ಸಿದ್ದಪಡಿಸಲಾಗುವುದು. ಮಣಿಪುರ ಹಾಗೂ ಪೆರ್ಡೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಅನುಷ್ಠಾನ ಮಾಡಲು ಯತ್ನಿಸುವುದಾಗಿ ಭರವಸೆ ನೀಡಿದ ಸೊರಕೆ, ತಾಲೂಕು ಕಚೇರಿಯ ಉಗ್ರಾಣದಲ್ಲಿ ಕೊಳೆಯುತ್ತಿರುವ ಕಂದಾಯ ಇಲಾಖೆಯ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.

26 ಜನರಿಗೆ 28 ಲಕ್ಷ ರೂ. ಮೊತ್ತದ ಸವಲತ್ತುಗಳನ್ನು ವಿತರಿಸಲಾಯಿತು. ಪಡುಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಮಯಂತಿ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ರೇಣುಕಾ ಪುತ್ರನ್, ದಿನೇಶ್ ಕೋಟ್ಯಾನ್, ಮಾಜಿ ಸದಸ್ಯ ನವೀನ್‌ಚಂದ್ರ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ತೆಂಕ ಎರ್ಮಾಳು ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಕುಮಾರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಪಡುಬಿದ್ರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ. ಸುಕುಮಾರ್. ತಹಶೀಲ್ದಾರ್ ಟಿ. ಜಿ..ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪಉಪಸ್ಥಿತರಿದ್ದರು.

ಗಮನಸೆಳೆದ ಸಮಸ್ಯೆಗಳು: ಪಡುಬಿದ್ರೆ ಬೋರ್ಡ್ ಶಾಲೆಯ ಬಳಿ ಪಾಳು ಬಿದ್ದಿರುವ ಕಟ್ಟಡದಲ್ಲಿ ಗಾಂಜಾ ಮಾರಾಟ, ನಂದಿಕೂರು ಕೆಐಎಡಿಬಿ ಪ್ರದೇಶದಲ್ಲಿ ಪಂಚಾಯತ್ ಪರವಾನಿಗೆ ಪಡೆಯದೆ ಕಟ್ಟಡಗಳ ನಿರ್ಮಾಣ, ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯಾಚರಿಸುತ್ತಿರುವ ಆಸ್ಪತ್ರೆಗಳ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಆಗುತ್ತಿರುವ ತೊಂದರೆ, ಹೆಜಮಾಡಿಯಲ್ಲಿ ಮತ್ಸಾಶ್ರಯ ಯೋಜನೆ ಅರ್ಜಿಗಳ ವಿಲೇವಾರಿ ಬಾಕಿ, ಪಡುಬಿದ್ರೆ ಎನ್‌ಟಿಪಿಸಿ ಯೋಜನೆ ಪ್ರದೇಶದಲ್ಲಿ 35 ವರ್ಷಗಳ ಹಿಂದೆ ಕಾಡಿಪಟ್ಣದ 35 ಮೊಗವೀರ ಕುಟುಂಬಗಳಿಗೆ ನಿವೇಶನ ಮಂಜೂರಾದ ಜಾಗದಲ್ಲಿ ಬೇರೆಯವರು ನೆಲೆಸಿದವರಿಗೆ ಈಗ ಹಕ್ಕುಪತ್ರ ನೀಡಿರುವುದು. ಪಡುಬಿದ್ರೆ ಸಿಎ ಬ್ಯಾಂಕ್‌ನಿಂದ ರಸಗೊಬ್ಬರಗಳಿಗೆ ನಿಗದಿತ ಬೆಲೆಗಿಂತ ಹೆಚ್ಚು ಬೆಲೆ ವಸೂಲಿ, ಮುಂತಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದರು. ಶಾಸಕರು ಹಾಗೂ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News