ಸೈಂಟ್ ಥೋಮಸ್ ಶಾಲೆಗೆ ದಾಳಿ ಪ್ರಕರಣ: ಮತ್ತೆ ನಾಲ್ವರ ಬಂಧನ
ಮಂಗಳೂರು, ಆ.2: ಅರಬಿಕ್ ಮತ್ತು ಉರ್ದು ಭಾಷೆಯನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಆರೋಪಿಸಿ ನೀರುಮಾರ್ಗ ಸಮೀಪದ ಪಡು ಬೊಂಡಂತಿಲದ ಸೈಂಟ್ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದಾಳಿ ನಡೆಸಿದ ಶ್ರೀ ರಾಮ ಸೇನೆಯ ನಾಲ್ವರು ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಸೈಂಟ್ ಥೋಮಸ್ ಶಾಲೆಯಲ್ಲಿ ಮಕ್ಕಳಿಗೆ ಅರಬಿಕ್ ಮತ್ತು ಉರ್ದು ಭಾಷೆಯನ್ನು ಬೋಧಿಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆಯ ಸುಮಾರು 35ರಿಂದ 40 ಮಂದಿ ಕಾರ್ಯಕರ್ತರು ಶನಿವಾರ ಬೆಳಗ್ಗೆ ತರಗತಿ ನಡೆಯುತ್ತಿರುವಾಗಲೇ ಶಾಲೆಗೆ ನುಗ್ಗಿ ತರಗತಿಗೆ ಅಡ್ಡಿಪಡಿಸಿದ್ದರು.
ಘಟನೆ ನಡೆದ ಬೆನ್ನಿಗೇ ದಕ್ಷಿಣ ಉಪ ವಿಭಾಗದ ಎಸಿಪಿ ಶೃತಿ ಎನ್.ಎಸ್.ರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈಗಳಾದ ಸುಧಾಕರ ಹಾಗೂ ವೆಂಕಟೇಶ್ ಮತ್ತು ಸಿಬ್ಬಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರವಿವಾರ ಮೂವರು, ಸೋಮವಾರ 13 ಮಂದಿ ಹಾಗೂ ಮಂಗಳವಾರ ಮತ್ತೆ ನಾಲ್ವರನ್ನು ಬಂಧಿಸುವ ಮೂಲಕ ಒಟ್ಟು 20 ಮಂದಿಯನ್ನು ಬಂಧಿಸಿದಂತಾಗಿದೆ.