ಮಂಗಳೂರು ಏರ್ಪೋರ್ಟ್ಗೆ ಬಂದಿಳಿದ ಹಜ್ ವಿಶೇಷ ವಿಮಾನ
ಮಂಗಳೂರು, ಆ.4: ಕೇಂದ್ರ ಹಜ್ ಸಮಿತಿ ವತಿಯಿಂದ ಈ ಬಾರಿ ಹಜ್ಗೆ ತೆರಳುವ ಯಾತ್ರಿಕರಿಗಾಗಿ ದಿಲ್ಲಿಯಿಂದ ಆಗಮಿಸಿರುವ ವಿಶೇಷ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
ಬುಧವಾರ ರಾತ್ರಿ ಮತ್ತು ಗುರುವಾರ ಮುಂಜಾನೆಯಿಂದಲೇ ಬಜ್ಪೆಯ ಹಳೆ ಏರ್ಪೋರ್ಟ್ಗೆ ಬಂದು ತಲುಪಿದ್ದ ಯಾತ್ರಿಕರನ್ನು ವಿಶೇಷ ಬಸ್ ಮೂಲಕ ಹೊಸ ಏರ್ ಪೋರ್ಟ್ಗೆ ಕರೆತರಲಾಯಿತು. ಬೆಳಗ್ಗೆ 8 ಗಂಟೆಯ ಬಳಿಕ ಹೊರಟ ಸುಮಾರು 152 ಮಂದಿ ಹಜ್ ಯಾತ್ರಿಕರು ವಿಶೇಷ ಬಸ್ ಸೌಲಭ್ಯದ ಮೂಲಕ 9:15ಕ್ಕೆ ಏರ್ಪೋರ್ಟ್ನ್ನು ತಲುಪಿದರು.
ಸಚಿವ ರೋಷನ್ಬೇಗ್ ಭೇಟಿ
ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಶನ್ ಬೇಗ್ ಬೆಳಗ್ಗೆ 9:30ಕ್ಕೆ ಮಂಗಳೂರಿನ ಹೊಸ ಏರ್ಪೋರ್ಟ್ಗೆ ಆಗಮಿಸಿ, ಹಜ್ ಯಾತ್ರಿಕರಿಗೆ ಶುಭಕೋರಿದರು. ಈ ಸಂದರ್ಭ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್. ಲೋಬೊ, ದ.ಕ. ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯಹ್ಯಾ ನಕ್ವಾ ಮಲ್ಪೆ, ಕಾಂಗ್ರೆಸ್ ಮುಖಂಡ ಟಿ.ಕೆ. ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.