ಅಂತರಾಜ್ಯ ಗಾಂಜಾ ಜಾಲ: 51 ಕೆಜಿ ಗಾಂಜಾ ವಶ

Update: 2016-08-04 11:47 GMT

ಮಂಗಳೂರು,ಆ.4: ಅಂತಾರಾಜ್ಯ ಗಾಂಜಾ ವ್ಯವಹಾರ ಜಾಲವೊಂದನ್ನು ಪತ್ತೆಹಚ್ಚಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಓರ್ವ ಆರೋಪಿ, ಇನ್ನೋವಾ ಕಾರಿನ ಜತೆಗೆ 51 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಚಂದ್ರಶೇಖರ್, ವಶಪಡಿಸಿಕೊಳ್ಳಲಾಗಿರುವ ಗಾಂಜಾದ ವೌಲ್ಯ 10,50,000 ರೂ.ಗಳಾಗಬಹುದು ಎಂದು ಹೇಳಿದರು.

ಬಂಧಿತ ಆರೋಪಿ ಮೊಯ್ದಿನ್ ನವಾಝ್ (29) ಎಂಬಾತ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಈ ಬೃಹತ್ ಪ್ರಮಾಣದ ಗಾಂಜಾವನ್ನು ಗೋಣಿಚೀಲಗಳಲ್ಲಿ ತುಂಬಿ ಇಂದು ಬೆಳಗ್ಗೆ ಖಾಸಗಿ ಇನ್ನೋವಾ ಕಾರಿನಲ್ಲಿ ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗೆ ಸಾಗಿಸಲು ಯತ್ನಿಸುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಆರೋಪಿಯ ಕಾರನ್ನು ಬೆನ್ನು ಹತ್ತಿದ ಪೊಲೀಸರು ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಕ್ರಾಸ್ ಬಳಿ, ಇಂದು ಬೆಳಗ್ಗೆ ಕಾರು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಯುಕ್ತರು ಹೇಳಿದರು.

ಆರೋಪಿ ಕಾಸರಗೋಡಿನ ಉಪ್ಪಳ ನಿವಾಸಿಯಾಗಿದ್ದು, ದುಬೈನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು, ನಷ್ಟದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಬಂದಿರುವ ಆತ ಕಳೆದ ಒಂದು ವರ್ಷದಿಂದ ಇಲ್ಲೇ ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದರು. ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಸುನಿಲ್ ವೈ. ನಾಯಕ್ ನೇತೃತ್ವದಲ್ಲಿ ಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

6 ತಿಂಗಳಲ್ಲಿ ವಶಪಡಿಸಿಕೊಂಡ ಬೃಹತ್ ಪ್ರಮಾಣದ ಗಾಂಜಾ!

ಕಳೆದ ಆರು ತಿಂಗಳಲ್ಲಿ ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾದ ಬೃಹತ್ ಪ್ರಮಾಣದ ಗಾಂಜಾ ಇದಾಗಿದೆ. ಇಂದು ನಡೆದ ಕಾರ್ಯಾಚರಣೆಯ ವೇಳೆ ಇನ್ನೋವಾ ಕಾರಿನಲ್ಲಿ ಓರ್ವ ವ್ಯಕ್ತಿ ಮಾತ್ರ ಇದ್ದು, ಈ ಜಾಲದಲ್ಲಿ ಬೇರೆಯವರು ಇದ್ದಾರೆಯೇ, ಈ ಹಿಂದೆಯೂ ಈತ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದನೇ ಎಂಬ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು. 

ರಿಚರ್ಡ್ ಅಪಹರಣ ಪ್ರಕರಣ: ಓರ್ವನ ಬಂಧನ

ರಾಜಸ್ತಾನದಲ್ಲ್ಲಿ ಮಂಗಳೂರಿನ ಕಿರ್ಲೋಸ್ಕರ್ ಡೀಲರ್‌ಶಿಪ್ ಉದ್ಯೋಗಿ ರಿಚರ್ಡ್ ಅಪಹರಣಕಾರರ ತಂಡದ ಶಂಕಿತ ನಾಲ್ವರ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಶೀಘ್ರ ಎಲ್ಲಾ ಆರೋಪಿಗಳ ಬಂಧನವಾಗಲಿದೆ. ಆರೋಪಿಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.

ಮಂಗಳೂರಿನ ಉರ್ವ ಚಿಲಿಂಬಿ ಸಮೀಪ ಮಗು ಮಾರಾಟಕ್ಕೆ ಯತ್ನಿಸಿ ಬಂಧಿತರಾದ ಆರೋಪಿಗಳು ಈ ಹಿಂದೆ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಹೆಚ್ಚಿನ ತನಿಖೆ ಉರ್ವ ಠಾಣಾ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News