ಲಾರಿ-ಜೀಪ್ ಢಿಕ್ಕಿ: ಇಬ್ಬರು ಗಂಭೀರ

Update: 2016-08-04 18:16 GMT

 ಉಪ್ಪಿನಂಗಡಿ, ಆ.4: ಗೂಡ್ಸ್ ಲಾರಿ ಹಾಗೂ ಜೀಪ್ ಮಧ್ಯೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಜೀಪ್ ಚಾಲಕ ಹಾಗೂ ಪ್ರಯಾಣಿಕನೋರ್ವ ಗಂಭೀರ ಗಾಯಗೊಂಡ ಘಟನೆ ಗುರುವಾರ ಉಪ್ಪಿನಂಗಡಿ ಬಳಿಯ ಪಂಜಳದಲ್ಲಿ ನಡೆದಿದೆ. ಅಪಘಾತದಿಂದ ಜೀಪ್ ಚಾಲಕ ಉರುವಾಲು ಪದವು ನಿವಾಸಿ ಮುಹಮ್ಮದ್ ರಫೀಕ್(32) ಹಾಗೂ ಸಹಸವಾರ ಬಂದಾರು ನಿವಾಸಿ ಅಬ್ದುಲ್ ಕರೀಂ(30) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಮುಹಮ್ಮದ್ ರಫೀಕ್ ಅವರ ಸ್ಥಿತಿ ಗಂಭೀರವಾಗಿದೆ. ಉಪ್ಪಿನಂಗಡಿ-ವಳಾಲ್ ಮಧ್ಯೆ ಜೀಪ್‌ನಲ್ಲಿ ಬಾಡಿಗೆ ನಡೆಸುತ್ತಿರುವ ಮುಹಮ್ಮದ್ ರಫೀಕ್ ಅವರು ತನ್ನ ಬಾವನಾದ ಅಬ್ದುಲ್ ಕರೀಂ ಜೊತೆ ಗುರುವಾರ ಬೆಳಗ್ಗೆ ಮಠದ ಹಿರ್ತಡ್ಕ ಬಳಿ ಸಂಬಂಧಿಕರೋರ್ವರ ಮನೆಯ ಗೃಹಪ್ರವೇಶಕ್ಕೆ ತೆರಳಿ ಅಲ್ಲಿಂದ ನೀರ ಕಟ್ಟೆಗೆ ಜೀಪಿನಲ್ಲಿ ತೆರಳುತ್ತಿದ್ದರು. ಆದರೆಪಂಜಳದ ಬಳಿ ಎದುರಿನಿಂದ ಬಂದ ಲಾರಿಯೊಂದು ಮುಖಾಮುಖಿ ಢಿಕ್ಕಿಹೊಡೆಯಿತು. ಘಟನೆಯಿಂದ ಗಾಯ ಗೊಂಡ ಮುಹಮ್ಮದ್ ರಫೀಕ್ ಹಾಗೂ ಅಬ್ದುಲ್ ಕರೀಂ ಅವರನ್ನು ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News