ಶಾಲೆಗೆ ಮರುಸೇರ್ಪಡೆಗೊಂಡ ಮಕ್ಕಳ ಮಾಹಿತಿಗೆ ವೆಬ್ಸೈಟ್: ವನಿತಾ
ಉಡುಪಿ, ಆ.7: ಈಗಾಗಲೇ ಶಾಲೆಗೆ ಮರುಸೇರ್ಪಡೆಗೊಂಡ ಮಕ್ಕಳ ಬಗ್ಗೆ ನಿರಂತರ ಕಣ್ಣಿಡಲು ಜಿಪಂ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಮಾರ್ಗದರ್ಶನದಲ್ಲಿ ವೆಬ್ಸೈಟ್ನ್ನು ರೂಪಿಸಲಾಗಿದ್ದು, ಇದರಲ್ಲಿ ಮಕ್ಕಳ ಸಮಗ್ರ ಮಾಹಿತಿ ಲಭ್ಯವಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಕರೆಯಲಾದ ಸಭೆಯಲ್ಲಿ ಅವರು ಅಧಿಕಾರಿ ಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ‘ಶಾಲೆ ಕಡೆ ನನ್ನ ನಡೆ’ ಆಂದೋಲನದಡಿ ಎರಡನೆ ಹಂತವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರುಸೇರ್ಪಡೆ ಗೊಳಿಸುವುದಲ್ಲದೆ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನೇರವಾಗಿ 10ನೆ ತರಗತಿ ಸೇರ್ಪಡೆ ಹಾಗೂ ಬದುಕುವ ಕೌಶಲ್ಯವನ್ನು ಕಲಿಸಲಾಗುವುದು. ಕಲಿಕಾಸಕ್ತಿಯುಳ್ಳ ಮಕ್ಕಳಿಗೆ ಜೀವನ ಕೌಶಲ್ಯ ಕಲಿ ಸುವ ಜೊತೆಗೆ ಸ್ವ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಇಲಾಖೆಗಳ ಜೊತೆಗೆ ಸರಕಾರೇತರ ಸಂಘ ಸಂಸ್ಥೆಗಳ ನೆರವನ್ನು ಪಡೆಯುವ ಕುರಿತು ಹಾಗೂ ಯುವಶಕ್ತಿ ಸಬಲೀಕರಣಗೊಳಿಸಲು ನಿರಂತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಮುಂದಿನ ಹಂತದಲ್ಲಿ ಬಾಲಕಾರ್ಮಿಕರು ಇರುವ ಪ್ರದೇಶಗಳಿಗೆ ದಾಳಿ ನಡೆಸಲು ಯೋಜನೆ ರೂಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ವೆಬ್ಸೈಟ್ ಬಗ್ಗೆ ಮಾಹಿತಿ ನೀಡಿದ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ರೂಪಿಸಲ್ಪಟ್ಟ wcd.zpudupi.inನಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ್ ಜಿಲ್ಲೆಯಲ್ಲಿ ಮಕ್ಕಳ ಹಕ್ಕು ರಕ್ಷಣೆ ಹಾಗೂ ಶಿಕ್ಷಣಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಪ್ರಸಕ್ತ ಸಾಲಿನಲ್ಲಿ 17 ಮಕ್ಕಳು ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೀನುಗಾರಿಕೆ, ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವವರಿಗೆ ತಮ್ಮಲ್ಲಿರುವ ಕಾರ್ಮಿಕರ ಮಕ್ಕಳನ್ನು ದುಡಿಸಿಕೊಳ್ಳದಿರುವ ಬಗ್ಗೆ ಹಾಗೂ ಅವರ ಮಕ್ಕಳು ಶಾಲೆಗೆ ಹೋಗುವುದನ್ನು ಖಾತರಿಪಡಿಸಿಕೊಳ್ಳಲು ವಿಶೇಷ ಮಾಹಿತಿ ಶಿಬಿರ ಆಗಸ್ಟ್ ತಿಂಗಳಲ್ಲಿ ನಡೆಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ವಿಪ್ರೊ, ಇನ್ಫೊಸಿಸ್ ಕಂಪೆನಿಗಳ ನೆರವಿನೊಂದಿಗೆ ಪ್ಯಾಕೇಜ್ ಕೊಡಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದ ಅವರು, ಎಂಎಸ್ಡಬ್ಯ್ಲು ಹಾಗೂ ಕಾನೂನು ವಿದ್ಯಾರ್ಥಿಗಳ ನೆರವನ್ನು ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಪಡೆಯಲಾಗುವುದು ಎಂದರು.
ಭಿಕ್ಷಾಟನೆ ನಿರ್ಮೂಲನೆಗೆ ಕಾರ್ಯಾಚರಣೆ
ಕಠಿಣ ಕ್ರಮಗಳ ಹೊರತಾಗಿಯೂ ಜಿಲ್ಲೆಯಲ್ಲಿ ವಿವಿಧ ಕಾರಣ ಹಾಗೂ ವಿವಿಧ ಸಂದಭರ್ಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಇದನ್ನು ತಡೆಯಲು ಎನ್ಸಿಸಿ ಕಮಾಂಡರ್ಸ್, ಸಂಚಾರ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಲು ಯೋಜಿಸಲಾಗಿದೆ. ಸಾರ್ವಜನಿಕರು ಯಾರಿಗೂ ಭಿಕ್ಷೆ ನೀಡಬಾರದು ಎಂದು ವನಿತಾ ತೊರವಿ ತಿಳಿಸಿದರು.