ಹನ್ನೆರಡುಕವಲು: ನೀರುಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ

Update: 2016-08-08 14:46 GMT

ಬೆಳ್ತಂಗಡಿ, ಆ.8: ಆಗಸ್ಟ್ 6ರಂದು ಬೆಳಗ್ಗೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಂಬೋಡಿ ಗ್ರಾಮದ ಹನ್ನೆರಡುಕವಲು ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

ಆರಂಬೋಡಿ ಹನ್ನೆರಡಲು ಕವಲು ನಿವಾಸಿ ವಸಂತ ಶೆಟ್ಟಿ (58) ಹಾಗೂ ತಾಕೊಡೆ ನಿವಾಸಿ ಚಾರ್ಲಿ (55) ಮೃತಪಟ್ಟವರು.

ವಸಂತ ಶೆಟ್ಟಿಯವರು ತನ್ನ ಹನ್ನೆರಡುಕವಲು ಮನೆ ಸಮೀಪದ ಫಲ್ಗುಣಿ ನದಿಯಲ್ಲಿ ಆ.6ರಂದು ಬೆಳಗ್ಗೆ ಆಕಸ್ಮಿಕವಾಗಿ ಮುಳುಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆಸಿದಾಗ ನದಿ ಬದಿಯಲ್ಲಿ ಚಪ್ಪಲಿ, ಬಕೆಟ್ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸುತಿದ್ದ ಸಂದರ್ಭ ವಸಂತ ಶೆಟ್ಟಿಯವರ ಗೆಳೆಯನಾಗಿದ್ದ ಚಾರ್ಲಿ ಹುಡುಕಾಟಕ್ಕಾಗಿ ನೀರಿಗೆ ಇಳಿದಿದ್ದು, ನೀರಿನ ರಭಸದಿಂದ ಮೇಲಕ್ಕೆ ಬರಲಾಗದೆ ಅವರೂ ಸಹ ನೀರಿಗೆ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದರು.

ಬಂಟ್ವಾಳ ಹಾಗೂ ಮೂಡುಬಿದಿರೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ 2 ದಿನದ ನಿರಂತರ ಹುಡುಕಾಟದ ಬಳಿಕ ಸೋಮವಾರ ಬೆಳಗ್ಗೆ ಇಬ್ಬರ ಮೃತದೇಹವೂ ಪತ್ತೆಯಾಗಿದೆ. ವಸಂತ ಶೆಟ್ಟಿಯವರ ಮೃತದೇಹ ಪುಚ್ಚೇರಿ ಡ್ಯಾಂನಲ್ಲಿ ಪತ್ತೆಯಾಗಿದ್ದರೆ ಚಾರ್ಲಿಯವರ ಮೃತದೇಹ ಮಂಗಳೂರು ತಾಲೂಕಿನ ಇರುವೈಲು ಡ್ಯಾಂನಲ್ಲಿ ಪತ್ತೆಯಾಗಿದೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News