ಆಹಾರ ಸಚಿವರ ತವರಿನಲ್ಲೇ ಆದೇಶಕ್ಕಿಲ್ಲ ಬೆಲೆ!

Update: 2016-08-29 14:55 GMT

ಮಂಗಳೂರು, ಆ.29: ರಾಜ್ಯದೆಲ್ಲೆಡೆ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ದಾಸ್ತಾನು ಕೇಂದ್ರಗಳಿಂದ ಪ್ರತಿ ತಿಂಗಳ 30ರೊಳಗೆೆ ಪಡಿತರ ಸಾಮಗ್ರಿಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ತರಿಸಿಕೊಂಡು ತಿಂಗಳ 1ನೆ ತಾರೀಕಿನಿಂದಲೇ ಪಡಿತರ ವಿತರಣೆಯನ್ನು ಆರಂಭಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಆದೇಶಿದ್ದರೂ, ಸಚಿವರ ತವರು ಜಿಲ್ಲೆಯಲ್ಲೇ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.

ಪಡಿತರ ಪೂರೈಕೆಗೆ ಸಂಬಂಧಿಸಿ ಇಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಿಗೆ ಶೇ.42ರಷ್ಟು ನ್ಯಾಯಬೆಲೆ ಅಂಗಡಿಗಳವರು ಮಾತ್ರವೇ ಪಡಿತರವನ್ನು ಪಡೆದುಕೊಂಡಿರುವ ಮಾಹಿತಿ ಬಹಿರಂಗಗೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 474 ನ್ಯಾಯಬೆಲೆ ಅಂಗಡಿಗಳಿದ್ದು, 310 ನ್ಯಾಯಬೆಲೆ ಅಂಗಡಿಗಳನ್ನು ಕೃಷಿಪತ್ತಿನ ಸಹಕಾರ ಸಂಘಗಳು ನಡೆಸುತ್ತಿವೆ. ಉಳಿದವುಗಳು ಖಾಸಗಿಯವರ ಮಾಲಕತ್ವದಲ್ಲಿದ್ದು, ಕಳೆದ ತಿಂಗಳು 20 ತಾರೀಕಿನಿಂದಲೇ ಪಡಿತರ ಸಾಮಗ್ರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಸಾಗಾಟವಾಗಿದ್ದು, ಈ ಬಾರಿ 24 ತಾರೀಕಿನಿಂದ ಪೂರೈಕೆ ಆರಂಭಗೊಂಡಿದೆ. ಇದೀಗ ಪಡಿತರ ವಿತರಣೆ ಆರಂಭಿಸಲು ಎರಡು ದಿನಗಳಷ್ಟೇ ಬಾಕಿ ಉಳಿದಿದ್ದರೂ ಇನ್ನೂ ಶೇ. 50ಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿಗೆ ಇನ್ನೂ ಪಡಿತರ ಸಾಮಗ್ರಿಗಳು ತಲುಪದಿರುವ ಬಗ್ಗೆ ಸಚಿವ ಖಾದರ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೈದರು.

ಪಡಿತರವನ್ನು ಇನ್ನೂ ಪಡೆಯದಿರುವ ನ್ಯಾಯಬೆಲೆ ಅಂಗಡಿಗಳ ಮಾಹಿತಿ ನೀಡುವಂತೆ ಸಚಿವರು ಸಭೆಯಲ್ಲಿ ತಿಳಿಸಿದಾಗ ಮಂಗಳೂರು ತಾಲೂಕಿನ ಗ್ರಾಮಾಂತರದಲ್ಲಿ 110 ಹಾಗೂ ಪಟ್ಟಣದಲ್ಲಿ 56 ನ್ಯಾಯಬೆಲೆ ಅಂಗಡಿಗಳಿವೆ. ಗ್ರಾಮಾಂತರದ54 ಅಂಗಡಿಗಳು ಹಾಗೂ ಪಟ್ಟಣದ 26 ಅಂಗಡಿಗಳು ಮಾತ್ರವೇ ಪಡಿತರ ಸಾಮಗ್ರಿ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದರು. ಅನ್ನಭಾಗ್ಯ ಯೋಜನೆಯ ಬಳಿಕ ಪಡಿತರ ಪ್ರಮಾಣ ಹೆಚ್ಚಾಗಿರುವುದರಿಂದ ಅಂಗಡಿಗಳಲ್ಲಿ ದಾಸ್ತಾನು ಇಡಲು ಸ್ಥಳಾವಕಾಶದ ಕೊರತೆಯಿಂದ ಅಂಗಡಿಗಳವರು ಸಾಗಿಸಲು ಹಿಂದೇಟು ಹಾಕಿದ್ದಾರೆಂಬ ಅಧಿಕಾರಿಗಳು ಸಮಜಾಯಿಷಿ ನೀಡಿದರು.

2 ದಿನಗಳ ಗಡುವು: ಆಗದಿದ್ದಲ್ಲಿ ಗೌರವಪೂರ್ವಕವಾಗಿ ಬಿಟ್ಟುಬಿಡಲಿ!

ಸೆಪ್ಟಂಬರ್ ತಿಂಗಳ ಪಡಿತರ ಪೂರೈಕೆಗೆ ಸಂಬಂಧಿಸಿ ಇನ್ನು ಉಳಿದಿರುವ ಎರಡು ದಿನಗಳಲ್ಲಿ ಪಡಿತರವನ್ನು ತರಿಸಿಕೊಳ್ಳಲು ಬಾಕಿ ಉಳಿದಿರುವ ಎಲ್ಲಾ ನ್ಯಾಯ ಬೆಲೆ ಅಂಗಡಿಯವರು ಕ್ರಮ ಕೈಗೊಳ್ಳಬೇಕು. ಸಾಗಾಟಕ್ಕೆ ಸಂಬಂಧಿಸಿ ಕ್ವಿಂಟಾಲೊಂದಕ್ಕೆ 1 ಕಿ.ಮೀ.ಗೆ 1ರೂ.ನಂತೆ ಇದ್ದ ಸಾಗಾಟ ಶುಲ್ಕವನ್ನು 1.40 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹಾಗೂ ವ್ಯಾಪ್ತಿಯನ್ನು 30 ಕಿ.ಮೀ.ಗೆ ವಿಸ್ತರಿಸಲಾಗಿದೆ. ಸಾಮಗ್ರಿಗಳನ್ನು ವಾಹನದಿಂದ ಲೋಡ್ ಅನ್‌ಲೋಡ್ ಮಾಡಲು ಹಮಾಲಿಗೆ ಒಂದು ಕ್ವಿಂಟಾಲ್‌ಗೆ 10ರೂ.ನಿಂದ 16 ರೂ.ಗಳಿಗೆ ಬೆಲೆ ನಿಗದಿ ಮಾಡಲಾಗಿದೆ. ಹಾಗಿದ್ದರೂ, ಸರಕಾರದಿಂದ ಕಾಳಸಂತೆಯಲ್ಲಿ ಪಡಿತರ ಸಾಮಗ್ರಿಗಳು ಸೋರಿಕೆಯಾಗುವುದನ್ನು ತಪ್ಪಿಸಲು ಸರಕಾರ ಜಾರಿಗೊಳಿಸಿರುವ ಕೂಪನ್ ಪದ್ಧತಿಯನ್ನು ವಿರೋಧಿಸಿ ಮೋಸ ಮಾಡಲು ಸಾಧ್ಯವಾಗದೆಂಬ ನಿಟ್ಟಿನಲ್ಲಿ ಈ ನ್ಯಾಯಬೆಲೆ ಅಂಗಡಿಗಳಿಂದ ಈ ರೀತಿ ಒಳಗಿಂದೊಳಗೇ ಯೂನಿಯನ್ ಮಾಡುವ ಕೆಲಸ ನಡೆಯುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗದು. ಹಾಗಾಗಿ ಪಡಿತರ ವಿತರಣೆ, ಸಾಗಾಟಕ್ಕೆ ಕಷ್ಟವಾಗುವ, ಸಾಧ್ಯವಾಗದ ನ್ಯಾಯಬೆಲೆ ಅಂಗಡಿಯವರು ತಿಳಿಸಿದರೆ ಅವರನ್ನು ಗೌರವಪೂರ್ವಕವಾಗಿ ಕಳುಹಿಸಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸೆ.1ರಿಂದ ಪಡಿತರ ವಿತರಣೆ ಆರಂಭಿಸದಿದ್ದರೆ ಮೊಕದ್ದಮೆ ದಾಖಲು

ಸೆ.1ರಿಂದ ಎಲ್ಲಾ ಅಂಗಡಿಗಳಲ್ಲೂ ಪಡಿತರ ವಿತರಣೆ ಆರಂಭವಾಗಲೇಬೇಕು. ಬುಧವಾರ ಸಂಜೆಯೊಳಗೆ ಎಲ್ಲಾ ಪಡಿತರ ಅಂಗಡಿಗಳವರೂ ಪಡಿತರ ಸಾಗಿಸಬೇಕು. ತಪ್ಪಿದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮಾಲಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಲಾಗುವುದು. ಪಡಿತರ ಸಾಗಣೆ ಆಗಿರುವ ಸಂಬಂಧ ಬುಧವಾರ ಸಂಜೆ ತನಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಡಿ.ಟಿ.ಜಯಣ್ಣ ಅವರಿಗೆ ಸಚಿವ ಯು.ಟಿ.ಖಾದರ್ ಸೂಚಿಸಿದರು.

ಸ್ಥಳಾವಕಾಶದ ಕೊರತೆ ಇದ್ದಲ್ಲಿ ಮೂರು ತಿಂಗಳೊಳಗೆ ಅದನ್ನು ಪರಿಹರಿಸಿಕೊಳ್ಳುವಂತೆ ನ್ಯಾಯಬೆಲೆ ಅಂಗಡಿಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಬೇಕು. ಸೆಪ್ಟೆಂಬರ್ ತಿಂಗಳ ವಿತರಣೆಗೆ ಅಗತ್ಯವಿರುವ ಪಡಿತರವನ್ನು ಎರಡು ಕಂತುಗಳಲ್ಲಿ ಸಾಗಿಸಲು ಸೂಚನೆ ರವಾನಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News