ರೈಲಿನಲ್ಲಿ ಅಮಲು ಪದಾರ್ಥ ನೀಡಿ ಪ್ರಯಾಣಿಕನ ಚಿನ್ನ ಕಳವು
ಮಂಗಳೂರು, ಆ. 29: ಮತ್ಸಗಂಧ ರೈಲಿನಲ್ಲಿ ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ತಂಡವೊಂದು ಅಮಲು ಪದಾರ್ಥದ ಬಿಸ್ಕಟ್ ನೀಡಿ ಆತನ ಬಳಿಯಿಂದ ಚಿನ್ನ ಹಾಗೂ ವಸ್ತುಗಳನ್ನು ದೋಚಿದ ಘಟನೆ ರವಿವಾರ ತಡರಾತ್ರಿ ನಡೆದಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಟ್ಲದ ಕಟೀಲ್ ಹೌಸ್ ನಿವಾಸಿ ಕ್ಲಿಫರ್ಡ್ ವೇಗಸ್ (38) ಎಂಬವರು ರವಿವಾರ ರಾತ್ರಿ ಸುಮಾರು 10 ಗಂಟೆಗೆ ಮಹಾರಾಷ್ಟ್ರದ ಪನ್ವೇಲ್ನಿಂದ ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸಿದ್ದಾರೆ. ಸುಮಾರು ನಾಲ್ಕೈದು ಮಂದಿಯ ತಂಡ ಈತನ ಬಳಿಕೆ ಬಂದು ಪರಿಚಯ ಮಾಡಿಸಿ ಆತನಿಗೆ ತಿನ್ನಲು ಅಮಲು ಪದಾರ್ಥವಿದ್ದ ಬಿಸ್ಕತ್ನ್ನು ನೀಡಿದ್ದರೆನ್ನಲಾಗಿದೆ. ಬಿಸ್ಕಟ್ನ್ನು ತಿಂದು ಕ್ಲಿಫರ್ಡ್ ವೇಗಸ್ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ತಂಡವು ಅವರ ಬಳಿ ಇದ್ದ ಚಿನ್ನದ ಸರ, ಉಂಗುರ, ಮೊಬೈಲ್ ಹಾಗೂ ಪರ್ಸ್ನ್ನು ದೋಚಿ ಪರಾರಿಯಾಗಿದೆ. ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ತೀರಾ ಅಸ್ವಸ್ಥ ಸ್ಥಿತಿಯಲ್ಲಿದ್ದ ಈತನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ರವಿವಾರ ತಡರಾತ್ರಿ ಈ ಕೃತ್ಯ ನಡೆದಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.