ವಳಾಲುಬೈಲು: ವಿವಾಹಿತ ನಿಗೂಢ ಮೃತ್ಯು

Update: 2016-08-31 18:13 GMT

ಉಪ್ಪಿನಂಗಡಿ, ಆ.31: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಜತ್ತೂರು ಗ್ರಾಮದ ವಳಾಲುಬೈಲು ಎಂಬಲ್ಲಿ ಬುಧವಾರ ಮುಂಜಾನೆ ಯುವಕನೊಬ್ಬನ ಮೃತದೇಹವು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ನಿವಾಸಿ ಅಹ್ಮದ್ ಎಂಬ ವರ ಪುತ್ರ ಶೌಕತ್ ಅಲಿ (28) ಎಂದು ಗುರುತಿಸಲಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಬಿದ್ದಿರುವುದನ್ನು ಇಂದು ಮುಂಜಾನೆ 3:30ರ ಸುಮಾರಿಗೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಪ್ಯಾಂಟ್‌ನ ಜೇಬಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಅದರ ಸಹಾಯದಿಂದ ಮೃತನ ಗುರುತು ಪತ್ತೆ ಹಚ್ಚಲಾಯಿತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಸಂಚಾರ ಪೊಲೀಸರು, ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಸಿ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ.
ಘಟನೆಯ ಬಗ್ಗೆ ಸಂಶಯ: ಮೃತ ಶೌಕತ್ ಅಲಿ ಅರೇಹಳ್ಳಿಯಲ್ಲಿ ಮರದ ಕಟ್ಟಿಂಗ್ ಕೆಲಸ ನಡೆಸುತ್ತಿದ್ದು, 3 ವರ್ಷಗಳ ಹಿಂದೆ ಸವಣೂರಿನ ಬಳಿಯ ಇಬಾಹೀಂ ಎಂಬವರ ಪುತ್ರಿ ಫೌಝಿಯಾರನ್ನು ಮದು ವೆಯಾಗಿದ್ದರು. ಇವರಿಗೆ ನವ ಜಾತು ಶಿಶು ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು. ಸೋಮವಾರವಷ್ಟೇ ಫೌಝಿಯಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದರು. ಪತ್ನಿ ಹಾಗೂ ಮಗುವನ್ನು ನೋಡಲೆಂದು ಮಂಗಳೂರಿಗೆ ಬಂದಿದ್ದ ಶೌಕತ್ ಅಲಿ, ಸೋಮವಾರ ಮಂಗಳೂರಿನ ಆಸ್ಪತ್ರೆ ಯಲ್ಲೇ ಕಳೆದಿದ್ದರು. ಮಂಗಳವಾರ ಪತ್ನಿಯ ತವರು ಮನೆ ಯಲ್ಲಿರುವ ಎರಡು ವರ್ಷದ ಮೊದಲ ಮಗುವನ್ನು ನೋಡಲು ತೆರಳಿದ್ದರು. ಅಲ್ಲಿಂದ ಸಂಜೆ ಹಿಂದಿರುಗಿದ್ದಾರೆನ್ನಲಾದ ಶೌಕತ್ ಅಲಿ ಮತ್ತೆ ಪತ್ತೆಯಾದದ್ದು ಹೆಣವಾಗಿ!.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮೃತ ಶೌಕತ್ ಅಲಿಯ ಚಿಕ್ಕಪ್ಪ ಹಾಗೂ ಅರೇಹಳ್ಳಿ ಗ್ರಾಪಂ ಸದಸ್ಯ, ಸಕಲೇಶಪುರ ತಾಲೂಕು ಮಾನವ ಹಕ್ಕು ಸಮಿತಿ ಅಧ್ಯಕ್ಷ ಮುಸ್ತಫಾ, ಶೌಕತ್ ಅಲಿಯು ಆತನ ಪತ್ನಿಯ ತಾಯಿ ಹಾಗೂ ಸಹೋದರರ ಜೊತೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಆಗಾಗ ಸಂಘರ್ಷ ನಡೆಯುತ್ತಿತ್ತು. ನವಜಾತ ಶಿಶುವನ್ನು ನೋಡಲೆಂದು ಮಂಗಳೂರಿನ ಆಸ್ಪತ್ರೆಗೆ ಬಂದ ಶೌಕತ್‌ನ ಮೇಲೆ ಅತ್ತೆ ಕೈ ಮಾಡಿದ್ದಾರೆಂದು ಆತ ತನ್ನ ಮನೆಯವರಿಗೆ ತಿಳಿಸಿದ್ದ. ಬಳಿಕ ತನ್ನ ಮೊದಲ ಮಗುವನ್ನು ತನ್ನ ಊರಿಗೆ ಕರೆದೊಯ್ಯಲು ಪತ್ನಿಯ ತವರು ಮನೆ ಸವಣೂರಿಗೆ ಹೋಗುತ್ತೇನೆಂದು ಶೌಕತ್ ತಿಳಿಸಿದ್ದ. ಅದರಂತೆ ಮಗುವನ್ನು ಕರೆದುಕೊಂಡು ಹೋಗಲು ಪತ್ನಿ ಮನೆಯವರು ನಿರಾಕರಿಸಿದ್ದನ್ನು ತನಗೆ ಹಾಗೂ ಆತನ ತಾಯಿ ಮೈಮುನಾಳಿಗೆ ತಿಳಿಸಿದ್ದ. ಅಲ್ಲದೆ, ತಾನು ಬುಧವಾರ ಬೆಳಗ್ಗೆ ಮನೆಗೆ ಬರುವುದಾಗಿ ತಿಳಿಸಿದ್ದ. ಆ ಬಳಿಕ ಯಾವುದೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.
ತನ್ನ ಮಗುವನ್ನು ತನ್ನೂರಿಗೆ ಕರೆದೊಯ್ಯುವ ವಿಚಾರದಲ್ಲಿ ಮಾತಿನ ಚಕಮಕಿಯಾಗಿರುವ ಸಾಧ್ಯತೆ ಇದ್ದು, ಅದರ ಮುಂದುವರಿದ ಭಾಗವಾಗಿ ಸಾವು ಸಂಭವಿಸಿರುವ ಸಾಧ್ಯತೆ ಇರುವುದರಿಂದ ಪ್ರಕರಣಕ್ಕೆ ಸಂಬಂಧಿಸಿ ಮೃತ ಶೌಕತ್ ಅಲಿಯ ಅತ್ತೆ, ಭಾವನನ್ನು ತೀವ್ರ ವಿಚಾರಣೆಗೆ ಒಳ ಪಡಿಸಲು ಮುಸ್ತಫಾ ಒತ್ತಾಯಿಸಿದ್ದಾರೆ. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯ ಪ್ರಕಾರ ಆತನ ದೇಹದಲ್ಲಿ 20ಕ್ಕೂ ಅಧಿಕ ಗಾಯಗಳಿವೆ. ಅಪಘಾತವಾದರೆ 1 ಯಾ 2 ಕಡೆ ಗಾಯ ಆಗುವಂತಹದ್ದು. ಆದರೆ ಶೌಕತ್‌ನ ತಲೆಯನ್ನು ಕತ್ತಿಯಿಂದ ಕಡಿದ ಹಾಗೆ ಇದೆ ಮತ್ತು ದೇಹವನ್ನು ಕಬ್ಬಿನ ಜಲ್ಲೆಗೆ ಕೊಟ್ಟ ಹಾಗೆ ಇದೆ. ಪಾದ ಕಾಲು ಮುರಿತಕ್ಕೊಳಗಾಗಿದೆ. ಹೀಗಾಗಿ ಇದು ಕೊಲೆ ನಡೆಸಿದ ಬಳಿಕ ದೇಹವನ್ನು ರಸ್ತೆಯ ಮೇಲೆ ಇಟ್ಟು ಅದರ ಮೇಲೆ ವಾಹನವನ್ನು ಚಲಾಯಿಸಿರುವ ಸಾಧ್ಯತೆ ಕಂಡು ಬರುತ್ತಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಸ್ತಫಾ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಸಂಚಾರ ಠಾಣಾ ಎಸ್ಸೈ ನಾಗರಾಜ್, ಉಪ್ಪಿನಂಗಡಿ ಠಾಣಾ ಎಸ್ಸೈ ತಿಮ್ಮಪ್ಪನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News