ಅಜ್ಜ-ಮೊಮ್ಮಗ ಕೆರೆಗೆ ಬಿದ್ದು ಮೃತ್ಯು

Update: 2016-10-19 18:44 GMT

ಸುಳ್ಯ, ಅ.19: ಐವರ್ನಾಡಿನ ಕುಳ್ಳಂಪಾಡಿಯಲ್ಲಿ ಅಜ್ಜ ಮತ್ತು ಮೊಮ್ಮಗ ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಐವರ್ನಾಡು ಗ್ರಾಮದ ಕುಳ್ಳಂಪಾಡಿ ಜತ್ತಪ್ಪಗೌಡ, ಅವರ ಮಗಳ ಮಗ ನಾಲ್ಕೂವರೆ ವರ್ಷ ಪ್ರಾಯದ ಜನಿತ್ ಮೃತಪಟ್ಟವರು. ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು, ರಾತ್ರಿ ವೇಳೆ ಬೆಳಕಿಗೆ ಬಂದಿದೆ.
ಜತ್ತಪ್ಪಗೌಡ ಮಂಗಳವಾರ ಸಂಜೆ ತೋಟದಲ್ಲಿ ಹುಲ್ಲು ಕತ್ತರಿಸುವ ಯಂತ್ರದಿಂದ ಕಳೆಗಳನ್ನು ಕತ್ತರಿಸುತ್ತಿ ದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಜನಿತ್ ಸಮೀಪದಲ್ಲಿದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದನೆನ್ನಲಾಗಿದೆ. ಆತನನ್ನು ರಕ್ಷಿಸಲು ಜತ್ತಪ್ಪ ಗೌಡ ಕೂಡಲೇ ಕೆರೆಗೆ ಹಾರಿದ್ದಾರೆ. ಮಗುವನ್ನು ರಕ್ಷಿಸಲು ಸಾಧ್ಯವಾಗದೇ ಅವರು ಕೂಡಾ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತೋಟಕ್ಕೆ ಹೋದ ಅಜ್ಜ-ಮೊಮ್ಮಗ ವಾಪಸ್ಸು ಬಾರದಿದ್ದಾಗ ಮನೆಯವರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೆರೆ ಬದಿಯಲ್ಲಿ ಹುಲ್ಲು ಕತ್ತರಿಸುವ ಯಂತ್ರ ಚಾಲು ಮಾಡಿದ ಸ್ಥಿತಿಯಲ್ಲಿತ್ತು. ಹಾಗೂ ಜತ್ತಪ್ಪಗೌಡರ ಕನ್ನಡಕವು ಅಲ್ಲೇ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಳಿಕ ಅಗ್ನಿಶಾಮಕ ದಳ ದವರಿಗೆ, ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದರು.
ಬುಧವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಮನೆಯವರಿಗೆ ಒಪ್ಪಿಸಲಾಯಿತು. ಜನಿತ್, ಜತ್ತಪ್ಪಗೌಡರ ಪುತ್ರಿ ನಿರ್ಮಲಾರವರ ಪುತ್ರ. ನಿರ್ಮಲಾರವರು ಅಯ್ಯನಕಟ್ಟೆಯ ವೆಂಕಪ್ಪಗೌಡರ ಪತ್ನಿಯಾಗಿದ್ದು, ಕೆಲವು ದಿನಗಳ ಹಿಂದೆ ಮಗನೊಂದಿಗೆ ತವರು ಮನೆಗೆ ಬಂದು ಉಳಿದು ಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News