ಸಿಂಚನ ಲೈಟಿಂಗ್ ಆ್ಯಂಡ್ ಲೈಟಿಂಗ್ ಕಂಟ್ರೋಲ್ಸ್ ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು, ನ. 17: ನಗರದ ಪಂಪ್ವೆಲ್ ಬಳಿಯ ಸಿಂಚನ ಲೈಟಿಂಗ್ ಆ್ಯಂಡ್ ಲೈಟಿಂಗ್ ಕಂಟ್ರೋಲ್ಸ್ ಸಂಸ್ಥೆಯ 5ನೆ ವಾರ್ಷಿಕೋತ್ಸವದ ಅಂಗವಾಗಿ ಇಂದು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಮಾಲಕ ರತ್ನಾಕರ ಸುವರ್ಣ ಮಾತನಾಡಿ, ಪ್ರತಿ ವಾರ್ಷಿಕೋತ್ಸವದ ಸಂದರ್ಭದಲ್ಲೂ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಬಡ ಕುಟುಂಬದಿಂದ ಬಂದ ನಾನು ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದೆ. ಶಿಕ್ಷಣ ಮುಂದುವರಿಸಲು ನಾನು ಕೂಡ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿದ್ದೆ. ಭವಿಷ್ಯದಲ್ಲಿ ಸ್ವಂತ ಉದ್ಯೋಗವನ್ನು ಹೊಂದಿ ನಾನು ಕೂಡ ಬಡ ಮಕ್ಕಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಅವರಿಗೆ ನೆರವಾಗಬೇಕೆಂಬ ಹಂಬಲವನ್ನೂ ಅಂದು ಹೊಂದಿದ್ದೆ. ಅದು ಸಂಸ್ಥೆಯ ಸ್ಥಾಪನೆಯೊಂದಿಗೆ ಈಡೇರಿದೆ ಎಂದರು.
ಬ್ರಹ್ಮಶ್ರೀ ವೇದಮೂರ್ತಿ ಕೇಶವ ಜೋಗಿತ್ತಾಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಟ್ಲ ವಿಧ್ಯಾನಸಭಾ ಕ್ಷೇತ್ರದ ಮಾಜಿ ಶಾಸಕ ರುಕ್ಮಯ ಪೂಜಾರಿ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್.ಕೋಟ್ಯಾನ್, ತುಳು ಸಾಹಿತ್ಯ ಅಡಾಡಮಿಯ ಮಾಜಿಅಧ್ಯಕ್ಷ ಉಮಾನಾಥ ಕೋಟ್ಯಾನ್, ಆರ್ಕಿಟೆಕ್ಚರ್ ರಶೀದ್, ವಸಂತ ಸಾಲ್ಯಾನ್ ಕಾಪಿನಡ್ಕ, ತಂದೆ ದುಗ್ಗಪ್ಪ ಸುವರ್ಣ ಉಡುಪಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 100 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಸಂಸ್ಥೆಯ ಮಾಲಕ ರತ್ನಾಕರ ಸುವರ್ಣ ಸ್ವಾಗತಿಸಿದರು. ಯೋಗೀಶ್ ಪೂಜಾರಿ ವಂದಿಸಿದರು. ಪತ್ರಕರ್ತ ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.