ಉಡುಪಿ ಕನಕದಾಸರ ಕರ್ಮಭೂಮಿ: ಸಚಿವ ಪ್ರಮೋದ್

Update: 2016-11-17 15:45 GMT

ಉಡುಪಿ, ನ.17: ಉಡುಪಿ ಕನಕದಾಸರ ಕರ್ಮಭೂಮಿಯಾಗಿದೆ. ಕನಕರಿಗೂ ಉಡುಪಿಗೂ ಇರುವ ಅವಿನಾಭಾವ ಸಂಬಂಧದಿಂದಾಗಿ ಉಡುಪಿ ಯಲ್ಲಿ ಆಚರಿಸುವ ಕನಕ ಜಯಂತಿಗೆ ಅದರದ್ದೇ ಆದ ಮಹತ್ವವಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಗುರುವಾರ ಉಡುಪಿಯ ಗೋವಿಂದ ಕಲ್ಯಾಣಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಾತಿಯ ಎಲ್ಲೆ ಮೀರಿ ನಿಂತ ಕನಕದಾಸರು ವಾದಿರಾಜರ ಸಮಕಾಲೀನರು. ಶ್ರೀಕೃಷ್ಣನ ಪರಮ ಭಕ್ತರಾಗಿದ್ದ ಕನಕರು, ಉಡುಪಿಯಲ್ಲಿ ಶ್ರೀಕೃಷ್ಣ ನೆಲೆಸಿದ್ದಾನೆ ಎಂಬ ಕಾರಣದಿಂದ ಉಡುಪಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿದ್ದರು. ಈ ಕಾರಣಕ್ಕಾಗಿ ಉಡುಪಿ ಇಂದು ಹಲವು ಕ್ಷೇತ್ರಗಳಲ್ಲಿ ದೇಶದಲ್ಲೇ ಗಮನಾರ್ಹ ಸಾಧನೆ ಮಾಡಿದೆ ಎಂದ ಪ್ರಮೋದ್, ಕನಕದಾಸರು ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳಲ್ಲಿ ನೀಡಿರುವ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ‘ಸಂತಕವಿ ಕನಕದಾಸರು’ ಕಿರುಪುಸ್ತಕವನ್ನು ಸಚಿವರು ಬಿಡುಗೊಡೆ ಗೊಳಿಸಿದರು. ಕನಕದಾಸರ ಜಯಂತಿ ಪ್ರಯುಕ್ತ ಉಡುಪಿ ಡಯೆಟ್‌ನಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಸಚಿವರು ಬಹುಮಾನ ವಿತರಿಸಿದರು.

ವರ್ತಮಾನದ ತಲ್ಲಣಗಳಿಗೆ ಕನಕ ಉತ್ತರ: ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಮಂಗಳೂರು ವಿವಿಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದಲ್ಲಿ ಯೋಧರಾಗಿದ್ದ ಕನಕದಾಸರು ರಕ್ತಪಾತ, ಹಿಂಸೆಯ ಬಗ್ಗೆ ಜಿಗುಪ್ಸೆಗೊಂಡು ಯೋಧತ್ವದಿಂದ ದಾಸತ್ವದೆಡೆಗೆ ಪರಿರ್ವತನೆಗೊಂಡರು ಎಂದರು.

ಕನಕರ ಮನಪರಿವರ್ತನೆ ಸತ್ಯದ ಅನ್ವೇಷಣೆಯಾಗಿತ್ತು. ಯೋಧನಾಗಿದ್ದ ಕನಕ ಕವಿಯಾಗಿ ರೂಪುಗೊಂಡಿದ್ದ. 500 ವರ್ಷಗಳ ಹಿಂದಿನ ಕನಕರ ಕೃತಿಗಳು, ಕೀರ್ತನೆಗಳು ವರ್ತಮಾನದ ಹಲವು ಸಂಕಟಗಳಿಗೆ ಪರಿಹಾರ ನೀಡಬಲ್ಲವು. ಈ ಕೃತಿಗಳು ಮಾನವ ಕುಲದ ಭವಿಷ್ಯದ ಕನಸುಗಳಿಗೆ ಚೈತನ್ಯ ಮೂಡಿಸುತ್ತವೆ ಈ ಮೂಲಕ ಕನಕದಾಸರು ಎಲ್ಲ ಕಾಲದಲ್ಲಿಯೂ ಪ್ರಸ್ತುತರಾಗಿದ್ದಾರೆ ಎಂದು ಪ್ರೊ.ಶೆಟ್ಟಿ ನುಡಿದರು.

ಸಮಾರಂಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಉಡುಪಿ ತಾಪಂ ಅಧ್ಯಕ್ಷೆ ನಳನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ತಹಶೀಲ್ದಾರ್ ಮಹೇಶ್ಚಂದ್ರ, ಕನಕದಾಸ ಸಮಾಜದ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿ ಪೌರಾಯುಕ್ತ ಮಂಜುನಾಥಯ್ಯ ವಂದಿಸಿದರು. ಪ್ರಶಾಂತ್ ಹಾವಂಜೆ ಮತ್ತು ಭಾಗವತ್ ಕಾರ್ಯಕ್ರಮ ನಿರೂಪಿಸಿದರು. ಯೋಗೇಶ್ ಕಿಣಿ ಮತ್ತು ಬಳಗದಿಂದ ಕನಕದಾಸ ಕೀರ್ತನೆಗಳ ಗೀತ ಗಾಯನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News