ಮನೆ ಕಳವು ಪ್ರಕರಣ ಭೇದಿಸಿದ ಪಾಂಡೇಶ್ವರ ಪೊಲೀಸರು
ಮಂಗಳೂರು, ನ. 24: ಮನೆ ಕಳವು ಪ್ರಕರಣದ ಆರೋಪಿಯೋರ್ವನನ್ನು ಬಂಧಿಸಿರುವ ಪಾಂಡೇಶ್ವರ ಠಾಣಾ ಪೊಲೀಸರು ಆತನಿಂದ 3,15,000 ರೂ. ವೌಲ್ಯದ 119 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ಬಗೇವಾಡಿ ಗ್ರಾಮದ ನಿವಾಸಿ ಪ್ರಸ್ತುತ ಕದ್ರಿ ಪಾರ್ಕ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಚಂದ್ರಶೇಖರ (21) ಬಂಧಿತ ಆರೋಪಿ.
ಪ್ರಭಾಕರ ಎನ್. ಪೂಂಜಾರ ಮನೆಯ ದೇವರ ಕೋಣೆಯಲ್ಲಿ ಇರಿಸಿದ್ದ ಸುಮಾರು 35 ಗ್ರಾಂ ತೂಕದ ದೇವರ ಪೆಂಡೆಂಟ್, ಚಿನ್ನದ ಕರಿಮಣಿ ಸರ, 45 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 56 ಗ್ರಾಂ ತೂಕದ ಚಿನ್ನದ ಬೌಲ್, 16 ಗ್ರಾಂ ತೂಕದ ಚಿನ್ನದ ಚಮಚ, 10 ಗ್ರಾಂ ತೂಕದ ಚಿನ್ನದ ಉಂಗುರ, 20 ಗ್ರಾಂ ತೂಕದ ನವರತ್ನ ಚಿನ್ನದ ಉಂಗುರ, 40 ಗ್ರಾಂ ತೂಕದ ಚಿನ್ನದ ಕೈ ಕಡಗ, 8 ಗ್ರಾಂ ತೂಕದ ಚಿನ್ನದ ಪಂಡೆಂಟ್ ಸಹಿತ ಒಟ್ಟು 233 ಗ್ರಾಂ ತೂಕದ ಚಿನ್ನಾಭರಣಗಳು ಫೆಬ್ರವರಿ 13ರಂದು ರಾತ್ರಿ 9 ಗಂಟೆಯಿಂದ 14ರ ಬೆಳಗ್ಗೆ 7ಗಂಟೆಯ ಮಧ್ಯದಲ್ಲಿ ಕಳುವಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪಾಂಡೇಶ್ವರ ಪೊಲೀಸ್ ಠಾಣಾ ನಿರೀಕ್ಷಕ ಬೆಳ್ಳಿಯಪ್ಪ ಕೆ. ಅವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಆರೋಪಿ ಚಂದ್ರಶೇಖರನನ್ನು ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ಆತ ವಿವಿಧ ಜ್ಯುವೆಲ್ಲರಿ ಅಂಗಡಿಗಳಿಗೆ ಮಾರಾಟ ಮಾಡಿದ ಸುಮಾರು 119 ಗ್ರಾಂ ತೂಕದ 3,15,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ ಹಾಗೂ ಸಿಬ್ಬಂದಿಯಾದ ವಿಶ್ವನಾಥ, ಗಂಗಾಧರ ಧನಂಜಯ ಗೌಡ, ಶೇಖರ್ ಗಟ್ಟಿ, ಸತ್ಯನಾರಾಯಣ ಚಂದ್ರಶೇಖರ, ವಿನೋದ ಪುರುಷೋತ್ತಮ ಸುನೀತಾ, ವಿಶ್ವನಾಥ ಬುಡೋಳಿ ಪತ್ತೆ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.