ಉಡುಪಿ: ಎಡಪಕ್ಷಗಳಿಂದ ಆಕ್ರೋಶ್ ದಿವಸ್
ಉಡುಪಿ, ನ.28: ನೋಟುಗಳನ್ನು ಹಿಂಪಡೆದು ಜನರನ್ನು ಸಂಕಷ್ಟಕ್ಕೆ ಗುರಿ ಪಡಿಸಿರುವ ಕೇಂದ್ರ ಸರಕಾರದ ವಿರುದ್ಧ ಎಡ ಪಕ್ಷಗಳು ಇಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಆಕ್ರೋಶ್ ದಿವಸ್ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಪ್ಪು ಹಣ ಎಂಬುದು ಶೇ.6ರಷ್ಟು ಮಾತ್ರ ಹಣದ ರೂಪದಲ್ಲಿದ್ದರೆ, ಉಳಿದ ಶೇ.96ರಷ್ಟು ಚಿನ್ನ, ಭೂಮಿ, ಕಟ್ಟಡದ ರೂಪದಲ್ಲಿದೆ. ಮೋದಿ ಮೊದಲು ಇವುಗಳ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕಾಗಿದೆ ಎಂದು ಹೇಳಿದರು.
ದೇಶದಲ್ಲಿ ಕೋಟ್ಯಂತರ ಮಂದಿ ಅವಶ್ಯಕತೆಗಳಿಗೆ ಪ್ರಾಥಮಿಕ ವಿನಿಮಯ ಮಾಡಿಕೊಳ್ಳಲು ಹಣದ ಬಳಕೆಯಿಂದ ವಂಚಿತರಾಗಿದ್ದಾರೆ. ಆದುದರಿಂದ ಡಿ.30ರವರೆಗೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ 500ರೂ., 1000 ರೂ. ನೋಟುಗಳ ಬಳಕೆಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಐ ಉಡುಪಿ ಕಾರ್ಯದರ್ಶಿ ಕೆ.ವಿ.ಭಟ್, ಮುಖಂಡರಾದ ಅದಮಾರು ಶ್ರೀಪತಿ ಆಚಾರ್ಯ, ವಿಶ್ವನಾಥ ರೈ, ಶಶಿಧರ ಗೊಲ್ಲ, ಕವಿರಾಜ್, ಗುರುದತ್, ನಳಿನಿ, ಶೇಖರ್ ಬಂಗೇರ, ವೆಂಕಟೇಶ್ ಕೋಣಿ, ದಾಸು ಭಂಡಾರಿ, ಸಂಜೀವ ಶೇರಿಗಾರ್, ಕೆ.ಲಕ್ಷ್ಮಣ್ ಉಪಸ್ಥಿತರಿದ್ದರು.