ಮೋದಿ ದೇಶಕ್ಕೆ ಕೊಟ್ಟ ಆಶ್ವಾಸನೆ ಈಡೇರಿಸುತ್ತಿದ್ದಾರೆ: ಅರುಣ್ ಕುಮಾರ್ ಪುತ್ತಿಲ
ಪುತ್ತೂರು, ನ.28: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಕೊಟ್ಟಿರುವ ಆಶ್ವಾಸನೆಯನ್ನು ಇದೀಗ ಈಡೇರಿಸುತ್ತಿದ್ದಾರೆ. ನೋಟು ನಿಷೇಧದಿಂದಾಗಿ ಬಡವರ ಮತ್ತು ಶ್ರೀಮಂತರ ನಡುವಿನ ಅಸಮಾನತೆ ದೂರವಾಗುತ್ತಿದೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ನಮೋ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಸೋಮವಾರ ಸಂಜೆ ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೋದಿ ಕೆಲಸವನ್ನು ವಿರೋಧಿಸುತ್ತಿರುವವರು ದೇಶದ್ರೋಹ ಮಾಡುತ್ತಿದ್ದಾರೆ ಎಂಂದು ಆರೋಪಿಸಿದರು.
ಪರಿವಾರ ಸಂಘಟನೆಯ ಮುಖಂಡ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಮಾತನಾಡಿ ದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರದಾನಿ ಮೋದಿ ಅವರು ವ್ಯವಸ್ಥಿತ ಸೂತ್ರವನ್ನು ಮಾಡಿದ್ದು, ಇದರಿಂದಾಗಿ ಕಪ್ಪು ಹಣವಿರುವ ಕುಳಗಳಿಗೆ ಉಸಿರುಕಟ್ಟುವಂತೆ ಮಾಡಿದೆ. ಆದರೆ ಇದರಿಂದಾಗಿ ದೇಶಕ್ಕೆ ಸಾಕಷ್ಟು ಪ್ರಯೋಜನವಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಬ್ಯಾಂಕ್ ವ್ಯವಹಾರದ ಮೂಲಕ ನಡೆಯಲಿದ್ದು, ಹಳ್ಳಿ ಹಳ್ಳಿಗಳು ಅಭಿವೃದ್ಧಿಯಾಗಲಿದೆ ಎಂದರು.
ಅಜಿತ್ ರೈ ಹೊಸಮನೆ, ಚಿನ್ಮಯ್ ರೈ, ರಾಜೇಶ್ ಪೆರಿಗೇರಿ, ಸುಜೀಂದ್ರ ಪ್ರಭು, ಹರಿಣಿ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು. ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚುವ ಮೂಲಕ ಸಂಭ್ರಮಾಚರಿಸಿದರು.